ನಮ್ಮ ಪ್ರಾಂತ್ಯಗಳನ್ನೇ ನೋಡುವ ತಾಕತ್ತಿಲ್ಲ, ಕಾಶ್ಮೀರ ಯಾಕೆ? ಪಾಕ್ ಗೆ ಕ್ರಿಕೆಟಿಗ ಶಾಹಿದ್ ಅಫ್ರಿದಿ ಪ್ರಶ್ನೆ

ಗುರುವಾರ, 15 ನವೆಂಬರ್ 2018 (07:18 IST)
ಕರಾಚಿ: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇದಕ್ಕೂ ಮೊದಲು ಹಲವು ಬಾರಿ ಕಾಶ್ಮೀರ ವಿಚಾರವಾಗಿ ಮಾತನಾಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಈ ಬಾರಿ ತಮ್ಮ ರಾಷ್ಟ್ರವನ್ನೇ ಈ ವಿಚಾರದಲ್ಲಿ ಪ್ರಶ್ನೆ ಮಾಡಿದ್ದಾರೆ.

ನಮಗೆ ನಮ್ಮ ದೇಶದ ನಾಲ್ಕು ಪ್ರಾಂತ್ಯಗಳನ್ನೇ ನೋಡಿಕೊಳ‍್ಳಲು ಕಷ್ಟವಾಗಿದೆ. ಹೀಗಿರುವಾಗ ಕಾಶ್ಮೀರದ ಉಸಾಬರಿ ಯಾಕೆ ಎಂದು ಅಫ್ರಿದಿ ಪಾಕ್ ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನದ ತಮ್ಮ ಸಹ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಸರ್ಕಾರಕ್ಕೆ ಪತ್ರಿಕಾಗೋಷ್ಠಿಯೊಂದರಲ್ಲಿ ಸಲಹೆ ಕೊಟ್ಟಿರುವ ಅಫ್ರಿದಿ ‘ನಮ್ಮ ರಾಷ್ಟ್ರದ ಪ್ರಾಂತ್ಯವನ್ನೇ ನೋಡಿಕೊಳ್ಳಲು ಕಷ್ಟವಾಗಿರುವಾಗ ಕಾಶ್ಮೀರಕ್ಕಾಗಿ ಬೇಡಿಕೆ ಇಡುವುದರಲ್ಲಿ ಅರ್ಥವಿಲ್ಲ. ಕಾಶ್ಮೀರದಲ್ಲಿ ದಿನ ನಿತ್ಯ ಸಾಮಾನ್ಯ ಜನ ಸಾಯುತ್ತಿರುವುದನ್ನು ನೋಡಲು ನೋವಾಗುತ್ತದೆ. ಹಾಗಂತ ಕಾಶ್ಮೀರವನ್ನು ಭಾರತಕ್ಕೂ ಬಿಟ್ಟುಕೊಡಬೇಡಿ. ಅದು ಪ್ರತ್ಯೇಕ ರಾಷ್ಟ್ರವಾಗಲಿ’ ಎಂದು ಅಫ್ರಿದಿ ಹೇಳುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದು ಮತ್ತೊಂದು ವಿವಾದವಾಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ