ಚೆಪಾಕ್ ಸ್ಟೇಡಿಯಂನಲ್ಲಿ ಅಂತಿಮ ಟೆಸ್ಟ್ ಪಂದ್ಯ ನಡೆಸಲು ಆತಂಕ ದೂರ

ಶುಕ್ರವಾರ, 9 ಡಿಸೆಂಬರ್ 2016 (10:00 IST)
ಚೆನ್ನೈ: ತಮಿಳು ನಾಡು ಸಿಎಂ ಜಯಲಲಿತಾ ನಿಧನದ ಹಿನ್ನಲೆಯಲ್ಲಿ ಇಂಗ್ಲೆಂಡ್ ವಿರುದ್ಧ ಅಂತಿಮ ಟೆಸ್ಟ್ ಪಂದ್ಯವನ್ನು ಚೆನ್ನೈನ ಎಂ.ಎ. ಚಿದಂಬರಂ ಮೈದಾನದಲ್ಲಿ ನಡೆಸಬೇಕೋ ಎಂಬ ಬಗ್ಗೆ ಇದ್ದ ಆತಂಕ ದೂರವಾಗಿದೆ. ನಿಗದಿಯಂತೆ ಇಲ್ಲಿ ಡಿಸೆಂಬರ್ 16 ರಿಂದ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ.

ಈ ಬಗ್ಗೆ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ನ್ನು ಸಂಪರ್ಕಿಸಿದ್ದ ಬಿಸಿಸಿಐ ಪಂದ್ಯ ನಡೆಸಲು ಸಾಧ್ಯವೇ ಎಂದು ಪರಾಮರ್ಶಿಸಲು ಸೂಚಿಸಿತ್ತು. ಈ ಹಿನ್ನಲೆಯಲ್ಲಿ ತಮಿಳುನಾಡು ಪೊಲೀಸರನ್ನು ಸಂಪರ್ಕಿಸಿದ ಕ್ರಿಕೆಟ್ ಮಂಡಳಿ ಭದ್ರತೆ ಸಮಸ್ಯೆ ಎದುರಾಗಬಹುದೇ ಎಂದು ಪ್ರಶ್ನಿಸಿತ್ತು. ಹೀಗಾಗಿ ಅಂತಿಮ ಟೆಸ್ಟ್ ಪಂದ್ಯಕ್ಕೆ ಯಾವುದೇ ಭದ್ರತೆ ಸಮಸ್ಯೆ ಎದುರಾಗದು ಎಂದು ತಮಿಳುನಾಡು ಪೊಲೀಸರು ಭರವಸೆ ನೀಡಿದ ಹಿನ್ನಲೆಯಲ್ಲಿ ಇಲ್ಲಿ ನಿಗದಿಯಂತೆ ಪಂದ್ಯ ನಡೆಸಲು ಉದ್ದೇಶಿಸಲಾಗಿದೆ.

ಆದರೆ ಡಿಸೆಂಬರ್ 7 ರಂದು ಇಲ್ಲಿ ನಡೆಯಬೇಕಿದ್ದ ರಣಜಿ ಟ್ರೋಫಿ ಪಂದ್ಯ ರದ್ದಾಗಿದೆ. ಜಯಲಲಿತಾ ಸಾವಿನ ಹಿನ್ನಲೆಯಲ್ಲಿ ಏಳು ದಿನ ಶೋಕಾಚರಣೆ ನಡೆಯುತ್ತಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ