ದ್ವಿತೀಯ ಟೆಸ್ಟ್ ಪಂದ್ಯ ಹೀನಾಯವಾಗಿ ಸೋತ ಬಳಿಕ ಈ ವಿಚಾರಕ್ಕೆ ಪಶ್ಚಾತ್ತಾಪ ಪಟ್ಟುಕೊಂಡ ವಿರಾಟ್ ಕೊಹ್ಲಿ

ಮಂಗಳವಾರ, 18 ಡಿಸೆಂಬರ್ 2018 (10:19 IST)
ಪರ್ತ್: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ 146  ರನ್ ಗಳಿಂದ ಸೋತ ಬಳಿಕ ಟೀಂ ಇಂಡಿಯಾ ತಮ್ಮ ನಿರ್ಧಾರಗಳನ್ನು ತಾವೇ ಹಳಿದುಕೊಂಡಿದ್ದಾರೆ.


ಗೆಲ್ಲಲು 173 ರನ್ ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ನಿನ್ನೆಯ ದಿನದಂತ್ಯಕ್ಕೆ 5  ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿತ್ತು. ಇಂದು ಬೆಳಗಿನ ಅವಧಿಯಲ್ಲೇ 140 ರನ್ ಗಳಿಗೆ ಆಲೌಟ್ ಆಗಿ ಸೋತಿತು.

ಈ ಪಂದ್ಯದಲ್ಲಿ ಎಂಟು ವಿಕೆಟ್ ಕಬಳಿಸ ಆಸೀಸ್ ಸ್ಪಿನ್ನರ್ ನಥನ್ ಲಿಯೋನ್ ಪಂದ್ಯ ಶ್ರೇಷ್ಠರಾದರು. ವೇಗದ ಪಿಚ್ ಎಂದು ಕೇವಲ ವೇಗಿಗಳನ್ನು ಕಣಕ್ಕಿಳಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಂದ್ಯದ ಬಳಿಕ ಲಿಯನ್ ಯಶಸ್ಸು ನೋಡಿ ತಮ್ಮ ನಿರ್ಧಾರವನ್ನು ತಾವೇ ಹಳಿದುಕೊಂಡಿದ್ದಾರೆ.

‘ನಾವು ಪಿಚ್ ನೋಡಿ ನಾಲ್ವರು ವೇಗಿಗಳು ಸಾಕು ಎಂದು ಅಂದಾಜಿಸಿದೆವು. ಜಡೇಜಾರನ್ನು ನಾವು ಪರಿಗಣಿಸಲೇ ಇಲ್ಲ. ನಥನ್ ಈ ಪಿಚ್ ನಲ್ಲಿ ಚೆನ್ನಾಗಿಯೇ ಬೌಲ್ ಮಾಡಿದರು. ನಾವು ಸ್ಪಿನ್ನರ್ ಹಾಕಿಕೊಳ್ಳುವ ಬಗ್ಗೆ ಯೋಚನೆಯೇ ಮಾಡಲಿಲ್ಲ. ಸೋತಾಗ ಇಂತಹ ತಪ್ಪುಗಳೇ ಕಾಣುತ್ತವೆ’ ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ. ಅದೇನೇ ಇದ್ದರೂ ಕೊಹ್ಲಿ ಈ ನಿರ್ಧಾರ ಈಗ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ