ಐಪಿಎಲ್ ಭವಿಷ್ಯದ ಮೇಲೆ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಕರಿನೆರಳು

ಗುರುವಾರ, 27 ಮಾರ್ಚ್ 2014 (16:31 IST)
PR
PR
ನವದೆಹಲಿ: ಐಪಿಎಲ್ ಮೇಲೆ ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಕರಿನೆರಳು ಚಾಚಿದ್ದು, ಭಾರತದ ಕ್ರಿಕೆಟ್ ಭವಿಷ್ಯದ ಮೇಲೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆಗಳು ಕಂಡುಬಂದಿವೆ. ಐಪಿಎಲ್ 7ನೇ ಆವೃತ್ತಿಯ ಪಂದ್ಯಾವಳಿಯಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ತಂಡಗಳನ್ನು ಅಮಾನತುಗೊಳಿಸಬೇಕೆಂದು ಸುಪ್ರೀಂಕೋರ್ಟ್ ಸೂಚನೆ ನೀಡಿರುವುದು ಐಪಿಎಲ್ ಭವಿಷ್ಯಕ್ಕೆ ಕಂಟಕಪ್ರಾಯವಾಗಿದೆ. ಮುದ್ಗಲ್ ಸಮಿತಿಯ ವರದಿಯಲ್ಲಿ ಐಪಿಎಲ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಪ್ರಕರಣಗಳಲ್ಲಿ ಸಿಎಸ್‌ಕೆ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಆರೋಪಗಳನ್ನು ಹೊರಿಸಿರುವುದರಿಂದ ವಿಚಾರಣೆ ಮುಗಿಯುವ ತನಕ ಐಪಿಎಲ್ ಪಂದ್ಯಾವಳಿಗಳಿಂದ ಹೊರಗುಳಿಯುವಂತೆ ಅವೆರಡು ತಂಡಗಳಿಗೆ ಸೂಚಿಸಿದೆ.

ಈಗ ಐಪಿಎಲ್ ಏಳನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಬಿಸಿಸಿಐ ಮುಂದಿನ ನಡೆ ಏನು ಎನ್ನುವುದು ಪ್ರಶ್ನಾರ್ಥಕವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ಹೊರಗುಳಿದರೆ ಅದರ ಫ್ರಾಂಚೈಸಿಗಳ ಕತೆ ಏನು? ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಆಟಗಾರರ ಭವಿಷ್ಯವೇನು? ಈಗಾಗಲೇ ಎಲ್ಲ ತಂಡಗಳ ಆಟಗಾರರನ್ನು ಆಯ್ಕೆ ಮಾಡಿರುವುದರಿಂದ ಈ ಆಟಗಾರರಿಗೆ ಬೇರೆ ತಂಡಗಳಲ್ಲಿ ಸ್ಥಳಾವಕಾಶ ನೀಡುವುದು ಸಾಧ್ಯವಾಗುತ್ತದೆಯೇ ಮುಂತಾದ ಪ್ರಶ್ನೆಗಳು ಈಗ ಉದ್ಭವಿಸಿವೆ. ಬಿಸಿಸಿಐ ಅಧ್ಯಕ್ಷರೇ ಕಳಂಕಿತರಾಗಿ ಆ ಸ್ಥಾನವನ್ನು ತ್ಯಜಿಸುವಂತೆ ಸುಪ್ರೀಂಕೋರ್ಟ್ ಕಟುವಾದ ಸಂದೇಶ ನೀಡಿರುವುದು ಮತ್ತು ಟೀಂ ಇಂಡಿಯಾ ನಾಯಕ ಧೋನಿ ವಿರುದ್ಧ ಕೂಡ ಸರ್ಕಾರಿ ವಕೀಲ ಸಾಳ್ವೆ ಆರೋಪಗಳ ಸುರಿಮಳೆ ಸುರಿಸಿರುವುದರಿಂದ ಐಪಿಎಲ್ ಭವಿಷ್ಯವೇ ಡೋಲಾಯಮಾನವಾಗಿದೆ ಮತ್ತು ಧೋನಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.

ಅಧ್ಯಕ್ಷ ಸ್ಥಾನ ತ್ಯಜಿಸಲು ಶ್ರೀನಿವಾಸನ್ ಅವರಿಗೆ 24 ಗಂಟೆಗಳ ಗಡುವನ್ನು ಸುಪ್ರೀಂಕೋರ್ಟ್ ನೀಡಿದೆ. ಬಿಸಿಸಿಐ ಮುಂದೆ ಯಾವ ರೀತಿಯ ಕಾನೂನು ಹೋರಾಟ ಮಾಡುತ್ತದೆ ಎನ್ನುವುದನ್ನು ಕಾದುನೋಡಬೇಕು. ಸುಪ್ರೀಂಕೋರ್ಟ್ ತೀರ್ಪಿನಿಂದ ಐಪಿಎಲ್ ಪಂದ್ಯಾವಳಿಗಾಗಿ ಕಾತುರದಿಂದ ಕಾಯುತ್ತಿರುವ ಸಾವಿರಾರು ಕ್ರಿಕೆಟ್ ಅಭಿಮಾನಿಗಳಿಗೆ ಸಹಜವಾಗಿ ನಿರಾಶೆಯಾಗಿದೆ. ಟೀಂ ಇಂಡಿಯಾದ ನಾಯಕ ಧೋನಿಯ ಭವಿಷ್ಯದ ಮೇಲೂ ಕರಿನೆರಳು ಚಾಚಿದೆ.

ವೆಬ್ದುನಿಯಾವನ್ನು ಓದಿ