ಕಾಪ್ಟನ್ ಕೂಲ್‌ಗೆ ವಿಶ್ರಾಂತಿಯ ಅಗತ್ಯವಿದೆ: ಸೌರವ್ ಗಂಗೂಲಿ

ಶನಿವಾರ, 8 ಅಕ್ಟೋಬರ್ 2011 (12:19 IST)
ಅತಿಯಾದ ಕ್ರಿಕೆಟ್‌ನಿಂದ ತೀವ್ರ ದಣಿವು ಅನುಭವಿಸುತ್ತಿರುವ ಭಾರತೀಯ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದೀಗ ವಿಶ್ರಾಂತಿಯ ಅವಶ್ಯಕತೆಯಿದೆ ಎಂದು ಭಾರತದ ಮಾಜಿ ಯಶಸ್ವಿ ನಾಯಕ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿ, ಕನ್ನಡ ಸುದ್ದಿ, ಕನ್ನಡ ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಮುಂಬರುವ ಆಸ್ಟ್ರೇಲಿಯಾ ಪ್ರವಾಸವನ್ನು ಪ್ರಮುಖವಾಗಿ ಗುರಿಯಾಗಿರಿಸಿಕೊಂಡಿರುವ ಸೌರವ್ ಗಂಗೂಲಿ, ಈ ಬಹುನಿರೀಕ್ಷಿತ ಸರಣಿಗೂ ಮುನ್ನ ಭಾರತೀಯ ನಾಯಕನಿಗೆ ಅಗತ್ಯದ ವಿಶ್ರಾಂತಿ ದೊರಕಬೇಕು ಎಂದು ಬಯಸಿದ್ದಾರೆ.

ಭಾರತದ ಹೊರಗಡೆ ನಿಜವಾದ ಪರೀಕ್ಷೆ ಎದುರಾಗಲಿದೆ. ಆದರೆ ನನ್ನ ಪ್ರಕಾರ ಧೋನಿಗೆ ವಿಶ್ರಾಂತಿ ನೀಡುವ ಕಾಲ ಕೂಡಿ ಬಂದಿದೆ. ಈಗಲೇ ಅವರು ಅತಿಯಾದ ಕ್ರಿಕೆಟ್‌ ಆಡಿದ್ದಾರೆ. ಎಲ್ಲ ಪ್ರಕಾರದ ಆಟದಲ್ಲೂ ಧೋನಿ ಭಾಗವಹಿಸುತ್ತಿದ್ದಾರೆ. ಹಾಗಾಗಿ ವಿಶ್ರಾಂತಿಗೆ ಈ ಜಾರ್ಖಂಡ್ ಮೂಲದ ಆಟಗಾರ ಅರ್ಹರಾಗಿದ್ದಾರೆ ಎಂದು ಗಂಗೂಲಿ ವಿವರಿಸಿದ್ದಾರೆ.

ನನಗನಿಸುತ್ತದೆ ಮುಂಬರುವ ವೆಸ್ಟ್‌ಇಂಡೀಸ್ ಪ್ರವಾಸದಿಂದ ಧೋನಿ ಅವರಿಗೆ ವಿಶ್ರಾಂತಿ ನೀಡಬಹುದು. ಇದರಿಂದ ಆಸ್ಟ್ರೇಲಿಯಾ ಪ್ರವಾಸಕ್ಕೆ ತಾಜಾತನದಿಂದ ಪಯಣಿಸಬಹುದು. ಯಾಕೆಂದರೆ ಆಸೀಸ್ ಪ್ರವಾಸದಲ್ಲಿ ಭಾರತೀಯ ನಾಯಕ ತಾಜಾತನದಿಂದ ಕೂಡಿರಬೇಕಾದ ಅಗತ್ಯವಿದೆ. ಇಲ್ಲವಾದ್ದಲ್ಲಿ ಮತ್ತದೇ ಇಂಗ್ಲೆಂಡ್ ಪ್ರವಾಸದ ಫಲಿತಾಂಶ ಪುನರಾವರ್ತನೆಯಾಗಬಹುದು ಎಂದು ದಾದಾ ಎಚ್ಚರಿಸಿದರು.

ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಲಿದೆ. ಸರಣಿಯ ಮೊದಲ ಪಂದ್ಯವು ಡಿಸೆಂಬರ್ 26ರಂದು ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿದೆ.

ಇತ್ತೀಚೆಗಿನ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 4-0 ಅಂತರದ ಮುಖಭಂಗಕ್ಕೊಳಗಾಗಿದ್ದ ಮಹಿ ಪಡೆಯು ಟೆಸ್ಟ್ ಅಗ್ರಪಟ್ಟವನ್ನು ಬಿಟ್ಟುಕೊಟ್ಟಿತ್ತು. ಹಾಗೆಯೇ ಏಕದಿನದಲ್ಲೂ 0-3 ಮುಖಭಂಗ ಎದುರಿಸಿತ್ತಲ್ಲದೆ ಎರಡರಿಂದ ಐದನೇ ಸ್ಥಾನಕ್ಕೆ ಕುಸಿತ ಕಂಡಿತ್ತು.

ವೆಬ್‌ದುನಿಯಾ ಕನ್ನಡ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

ವೆಬ್ದುನಿಯಾವನ್ನು ಓದಿ