ಕ್ರಿಕೆಟ್ ಮೇಲೆ ಭಯೋತ್ಪಾದನೆಯ ಛಾಯೆ, ಇಂಗ್ಲೆಂಡ್ ಪ್ರವಾಸ ರದ್ದು

ಗುರುವಾರ, 27 ನವೆಂಬರ್ 2008 (15:07 IST)
ಮುಂಬಯಿಯಲ್ಲಿ ನಡೆದ ಭಯೋತ್ಪಾದಕ ದಾಳಿ ರಾಷ್ಟ್ರದ ಕ್ರಿಕೆಟ್‌ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಪ್ರವಾಸಿ ಇಂಗ್ಲೆಂಡ್ ತಂಡ ನಿಗದಿತ ವೇಳಾಪಟ್ಟಿಯಂತೆ ಪ್ರವಾಸ ಮುಂದುವರಿಸಲು ನಿರಾಕರಿಸಿದೆ.

ಇಂಗ್ಲೆಂಡ್ ತಂಡ ಮುಂಬಯಿಯಲ್ಲಿ ಡಿಸೆಂಬರ್ 13ರಂದು ಆರಂಭಗೊಳ್ಳಲಿರುವ ಪ್ರಥಮ ಟೆಸ್ಟ್‌ನಲ್ಲಿ ಆಡಬೇಕಿದೆ.

ಇಂಗ್ಲೆಂಡ್ ತಂಡದ ಮಾಧ್ಯಮ ವಕ್ತಾರ ಆಂಡ್ರ್ಯೂ ವಾಲ್‌ಪೊಲೆ, ತಂಡ ಕೂಡಲೆ ಇಂಗ್ಲೆಂಡ್‌ಗೆ ಮರಳಲಿದೆ ಎಂಬ ಊಹೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

"ನಾವು ಮಿ. ಶ್ರೀನಿವಾಸನ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಮತ್ತು ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸಮಯ ತೆಗೆದುಕೊಳ್ಳುತ್ತೇವೆ" ಎಂದು ವಾಲ್‌ಪೋಲೆ ತಿಳಿಸಿದ್ದಾರೆ. ಇಂಗ್ಲೆಂಡ್ ತಂಡ ಆರನೇ ಏಕದಿನಕ್ಕಾಗಿ ಗೌಹಾಟಿಗೆ ತೆರಳಲು ನಿರಾಕರಿಸಿದೆ ಎಂಬ ವರದಿಗಳ ಬಗ್ಗೆಯೂ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

WD

ಕಳೆದ ತಿಂಗಳು ಉಗ್ರರ ದಾಳಿಗೆ ಗುರಿಯಾಗಿದ್ದ ಗೌಹಾಟಿಯಲ್ಲಿ 60ಜನ ಬಲಿಯಾಗಿದ್ದರು.

ಏಳನೇ ಮತ್ತು ಅಂತಿಮ ಏಕದಿನ ದೆಹಲಿಯಲ್ಲಿ ಮುಂದಿನವಾರ ನಡೆಯಬೇಕಿದೆ.

ಬಿಸಿಸಿಐ ಆಧಿಕಾರಿಗಳು ಸಹ ಈಗಲೇ ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲವೆಂದಿದ್ದಾರೆ. "ಇದು ಭಾರತದ ಪಾಲಿಗೆ ಅತ್ಯಂತ ಕರಾಳ ದಿನ. ಮತ್ತು ಈ ಸಂದರ್ಭ ಇಂಗ್ಲೆಂಡ್ ಪ್ರವಾಸವನ್ನಾಗಲಿ ಅಥವಾ ಚಾಂಪಿಯನ್ಸ್ ಲೀಗ್‌ ಅನ್ನಾಗಲಿ ರದ್ದುಗೊಳಿಸುವ ಬಗ್ಗೆ ಪ್ರತಿಕ್ರಿಯಿಸುವುದು ಸಾಧ್ಯವಿಲ್ಲ" ಎಂದು ಒರ್ವ ಬಿಸಿಸಿಐ ಆಧಿಕಾರಿ ಹೇಳಿದ್ದಾಗಿ ಬ್ರಿಟಿಷ್ ಪತ್ರಿಕೆ ವರದಿ ಮಾಡಿದೆ.

ಇಂಗ್ಲೆಂಡ್‌ನ ಹೈ ಪರ್‌ಫಾರ್ಮೆನ್ಸ್ ತಂಡ ಬೆಂಗಳೂರಿನಲ್ಲಿ ತರಬೇತಿ ನಿರತವಾಗಿದ್ದು, ತಮ್ಮ ಪ್ರವಾಸದ ಭವಿಷ್ಯದ ಬಗ್ಗೆ ಇಂಗ್ಲೆಂಡ್ ಸರಕಾರದ ಸೂಚನೆಗಳ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಮಾಂಟಿ ಪೆನೆಸರ್ ಮತ್ತು ಆಂಡ್ರ್ಯೂ ಸ್ಟ್ರಾಸ್, ಇಂಗ್ಲೆಂಡ್ ಟೆಸ್ಟ್ ತಂಡದೊಂದಿಗೆ ಅಬ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲು ಡಿಸೆಂಬರ್ 13ರಂದು ಮುಂಬಯಿ ತಲುಪಬೇಕಾಗಿತ್ತು.

ಮುಂಬಯಿ ಮೇಲೆ ಉಗ್ರರ ದಾಳಿಯ ನಂತರ ಗುರುವಾರ ಭಾರತಕ್ಕೆ ತೆರಳಬೇಕಿದ್ದ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್ ತಂಡ ಮಿಡಲೆಕ್ಸ್ ತಮ್ಮ ವಿಮಾನವನ್ನು ರದ್ದುಗೊಳಿಸಿತ್ತು.

PTI

ಏತನ್ಮಧ್ಯೆ ಕ್ರಿಕೆಟ್ ಆಸ್ಟ್ರೇಲಿಯಾ, ಟ್ವೆಂಟಿ20 ಚಾಂಪಿಯನ್ಸ್ ಲೀಗ್‌ನಲ್ಲಿ ಭಾಗವಹಿಸಲಿರುವ ತಮ್ಮ ತಂಡಗಳಾದ ವಿಕ್ಟೋರಿಯನ್ ಮತ್ತು ವೆಸ್ಟರ್ನ್ ಆಸ್ಟ್ರೇಲಿಯನ್ ತಂಡಗಳಿಗೆ ಭಾರತ ಪ್ರವಾಸ ಕೈಗೊಳ್ಳದಿರುವಂತೆ ಸೂಚನೆ ನೀಡಿದೆ.

ಮುಂದಿನ ವಾರ ಆರಂಭವಾಗಬೇಕಿದ್ದ ಟಿ20 ಚಾಂಪಿಯನ್ಸ್ ಲೀಗ್ ಸಂದರ್ಭ ವಿಕ್ಟೋರಿಯಾ ತಂಡ, ಪ್ರಸ್ತುತ ದಾಳಿಗೊಳಗಾಗಿರುವ ತಾಜ್ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿತ್ತು.

ಮುಂಬಯಿ ಮೇಲಿನ ಉಗ್ರರ ದಾಳಿಗೆ ಈಗಾಗಲೇ 101 ಜನ ಬಲಿಯಾಗಿದ್ದು, ಇದು ಇಂಗ್ಲೆಂಡ್‌ನ ಪ್ರವಾಸ ಮತ್ತು ಮುಂಬರುವ ಚಾಂಪಿಯನ್ಸ್ ಲೀಗ್ ಟ್ವೆಂಟಿ20 ಪಂದ್ಯಾವಳಿಗಳ ಭವಿಷ್ಯವನ್ನು ಡೋಲಾಯಮಾನವಾಗಿಸಿದೆ.