ಮಧ್ಯಪ್ರದೇಶದ ಇಂಧೋರ್ನಲ್ಲಿ ನಡೆಯಲಿರುವ ಏರ್ಟೆಲ್ ಎನ್ಕೆಪಿ ಸಾಳ್ವೆ ಚಾಲೆಂಜರ್ ಸಿರೀಸ್ ಟೂರ್ನಮೆಂಟ್ನಲ್ಲಿ ಭಾಗವಹಿಸುವ ಎಲ್ಲಾ ಮೂರು ತಂಡಗಳಲ್ಲಾಗಿ ಕರ್ನಾಟಕದ ಐದು ಮಂದಿ ಆಟಗಾರರು ಸ್ಥಾನ ಗಿಟ್ಟಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ.
ಇಂಡಿಯಾ ರೆಡ್, ಇಂಡಿಯಾ ಬ್ಲೂ ಹಾಗೂ ಇಂಡಿಯಾ ಗ್ರೀನ್ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳಾಗಿವೆ. ರೆಡ್ ತಂಡದಲ್ಲಿ ಉದಯೋನ್ಮುಖ ಆಟಗಾರರಾದ ಮನೀಷ್ ಪಾಂಡೆ ಮತ್ತು ಆರ್. ವಿನಯ್ ಕುಮಾರ್ ಕಾಣಿಸಿಕೊಂಡಿದ್ದರೆ ಗಣೇಶ್ ಸತೀಶ್ ಬ್ಲೂ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಅದೇ ರೀತಿ ಅನುಭವಿ ರಾಬಿನ್ ಉತ್ತಪ್ಪ ಮತ್ತು ಅಭಿಮನ್ಯು ಮಿಥುನ್ ಗ್ರೀನ್ ತಂಡದಲ್ಲಿದ್ದಾರೆ.
ಇಂಡಿಯಾ ಬ್ಲೂ ತಂಡವನ್ನು ಆಲ್ರೌಂಡರ್ ಯುವರಾಜ್ ಸಿಂಗ್ ಮುನ್ನೆಡೆಸಲಿದ್ದಾರೆ. ಹಾಗೆಯೇ ರೆಡ್ ತಂಡಕ್ಕೆ ದಿನೇಶ್ ಕಾರ್ತಿಕ್ ಹಾಗೂ ಗ್ರೀನ್ ತಂಡಕ್ಕೆ ಎಸ್. ಬದ್ರೀನಾಥ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಹಿನ್ನೆಲೆಯಲ್ಲಿ ಈ ಟೂರ್ನಿಯ ಎಲ್ಲಾ ಮೂರು ತಂಡದ ಆಟಗಾರರಿಗೂ ಮಹತ್ವದೆನಿಸಿಕೊಂಡಿದೆ.
ಎನ್ಕೆಪಿ ಸಾಳ್ವೆ ಚಾಲೆಂಜರ್ ಸಿರೀಸ್ ಟೂರ್ನಮೆಂಟ್ ಅಕ್ಟೋಬರ್ 8ರಿಂದ 11ರ ವರೆಗೆ ನಡೆಯಲಿದೆ. ಯುವರಾಜ್ರಂತೆ ತಮ್ಮ ಪುನರಾಗಮನವನ್ನು ಎದುರು ನೋಡುತ್ತಿರುವ ಪಠಾಣ್ ಬ್ರದರ್ಸ್ ಮತ್ತು ಆರ್. ಪಿ. ಸಿಂಗ್ ಅವರಿಗೂ ಈ ಟೂರ್ನಿ ಪ್ರಾಮುಖ್ಯವೆನಿಸಿದೆ.