ಟ್ವೀಟ್ ಮಾಡಿದ್ದಕ್ಕೆ ಬಿಸಿಸಿಐನಿಂದ ಶ್ರೀಶಾಂತ್‌ಗೆ ಎಚ್ಚರಿಕೆ

ಸೋಮವಾರ, 15 ಏಪ್ರಿಲ್ 2013 (15:39 IST)
ND
ND
ಇತ್ತೀಚೆಗೆ ಸಾಮಾಜಿಕ ತಾಣ ಟ್ವಿಟ್ಟರ್‌ನಲ್ಲಿ 2008ರ ಕಪಾಳಮೋಕ್ಷ ಘಟನೆಯನ್ನು ಕೆದಕಿದ್ದ ವೇಗದ ಬೌಲರ್ ಎಸ್.ಶ್ರೀಶಾಂತ್‌ಗೆ ಬಿಸಿಸಿಐ ಎಚ್ಚರಿಕೆ ನೀಡಿದೆ.

ಮತ್ತೊಮ್ಮೆ ಇಂತಹ ತಪ್ಪೆಸಗಿದರೆ ಶೋಕಾಸ್ ನೋಟಿಸ್ ನೀಡುವುದಾಗಿ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ಶ್ರೀಶಾಂತ್‌ಗೆ ಬಿಸಿಸಿಐ ಎಚ್ಚರಿಕೆಯನ್ನು ನೀಡಿದೆ ಎಂದು ಐಪಿಎಲ್ ಮೂಲಗಳು ತಿಳಿಸಿವೆ. 2008ರಲ್ಲಿ ವರದಿಯಾದಂತೆ ಹರ್ಭಜನ್ ತನಗೆ ಕಪಾಳಮೋಕ್ಷ ಮಾಡಿದ್ದಲ್ಲ. ಮೊಣಕೈಯಿಂದ ತಿವಿದಿದ್ದ. ಆತ ಎಲ್ಲವನ್ನೂ ಪೂರ್ವ ನಿಯೋಜಿತವಾಗಿ ನಡೆಸಿದ್ದ ಎಂದು ಟ್ವಿಟ್ಟರ್‌ನಲ್ಲಿ ಭಜ್ಜಿ ವಿರುದ್ಧ ಶ್ರೀಶಾಂತ್ ಆರೋಪ ಮಾಡಿದ್ದರು.

ಗುರುವಾರ ಬೆಂಗಳೂರಿನಲ್ಲಿ ನಡೆದ ಕೆಕೆಆರ್ ಹಾಗೂ ಆರ್‌ಸಿಬಿ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿ ವಾಕ್ಸಮರ ನಡೆಸಿದ್ದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್‌ಗೂ ಬಿಸಿಸಿಐ ಇದೇ ವೇಳೆ ಎಚ್ಚರಿಕೆಯನ್ನು ನೀಡಿದೆ. ಕೊಹ್ಲಿ, ಗಂಭೀರ್ ಅಶಿಸ್ತಿನಿಂದ ವರ್ತಿಸಿದ್ದಕ್ಕೆ ಮ್ಯಾಚ್ ರೆಫರಿಯಿಂದ ಛೀಮಾರಿಗೊಳಗಾಗಿದ್ದರು.

ವೆಬ್ದುನಿಯಾವನ್ನು ಓದಿ