ಮುಂಬರುವ ಏಕದಿನ ಸರಣಿಗಾಗಿನ ಮೊದಲೆರಡು ಪಂದ್ಯಗಳಿಂದ ಹರಭಜನ್ ಸಿಂಗ್ ಅವರನ್ನು ಹೊರಗಟ್ಟಿರುವ ನಿರ್ಧಾರವನ್ನು ಭಾರತದ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಸ್ವಾಗತಿಸಿದ್ದಾರೆ.
ದೇಶದ ಹಿತಾಸಕ್ತಿಗೆ ಮೊದಲ ಆದ್ಯತೆಯಾಗಿದ್ದು, ಹೀಗಾಗಿ ಹರಭಜನ್ ಸಿಂಗ್ ಅವರನ್ನು ತಂಡದಿಂದ ಕೈಬಿಟ್ಟಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ತಂಡದ ಒಳಿತಿಗಾಗಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಭಾರತದ ಶ್ರೇಷ್ಠ ಮಾಜಿ ಆಲ್ರೌಂಡರ್ ಕಪಿಲ್ ದೇವ್ ತಿಳಿಸಿದ್ದಾರೆ.
ಹರಭಜನ್ ಸಿಂಗ್ ಅವರಂತಹ ಅತ್ಯುತ್ತಮ ಸ್ಪಿನ್ನರಗಳನ್ನು ಕೈಬಿಡುವಾಗ ನಿಮ್ಮಲ್ಲಿ ನೋವುಂಟಾಗಬಹುದು. ಆದರೆ ಅವರನ್ನು ವಜಾ ಮಾಡಿರುವುದು ತಂಡದ ಒಳಿತಿಗಾದರೆ ನಾನು ಹ್ಯಾಪಿಯಾಗಲಿದ್ದೇನೆ. ಆಯ್ಕೆ ಸಮಿತಿ ನಿರ್ಧಾರದ ವಿರುದ್ಧ ನಾನು ಯಾವುದೇ ಮಾತುಗಳನ್ನಾಡುವುದಿಲ್ಲ ಎಂದವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಐಪಿಎಲ್ ಪ್ರದರ್ಶನದ ಆಧಾರದಲ್ಲಿ ರಾಹುಲ್ ಶರ್ಮಾ ಅವರಿಗೂ ಬುಲಾವ್ ನೀಡಿರುವುದನ್ನು ಕಪಿಲ್ ದೇವ್ ಸ್ವಾಗತಿಸಿದರು. ಐಪಿಎಲ್ ಸಹ ದೇಶದ ಕ್ರಿಕೆಟ್ನ ಭಾಗ. ನೀವು ಯಾಕೆ ವಿಭಿನ್ನ ರೀತಿಯಲ್ಲಿ ಯೋಚಿಸುತ್ತೀರಾ? ಐಪಿಎಲ್ ಹಾಗೂ ಐಸಿಎಲ್ ಹೊಸ ಆಟಗಾರರನ್ನು ಪಡೆಯುವ ಮಾರ್ಗವಾಗಿದೆ. ಇದರಿಂದಾಗಿಯೇ ಯೂಸುಫ್ ಸಹೋದರರನ್ನು ನಾವು ಪಡೆದಿದ್ದೆವು ಎಂದರು.
ಹಿರಿಯ ಆಟಗಾರರೆಂಬ ಅನುದಾನ ಯಾರಿಗೂ ನೀಡಬಾರದು. ಕೇವಲ ನಿರ್ವಹಣೆಯ ಆಧಾರದಲ್ಲೇ ತಂಡವನ್ನು ಆಯ್ಕೆ ಮಾಡಬೇಕು ಎಂದು ಕಪಿಲ್ ಸೇರಿಸಿದರು.