ವಿಶ್ವಕಪ್ ಮೊದಲೇ ನಿವೃತ್ತಿ ಯೋಚನೆಯಲ್ಲಿ ಮುರಳೀಧನ್

ಭಾನುವಾರ, 29 ನವೆಂಬರ್ 2009 (10:35 IST)
ವಯಸ್ಸು ತನ್ನ ಕ್ರೀಡಾಜೀವನದ ಮೇಲೆ ಪರಿಣಾಮ ಬೀರುತ್ತಿರುವುದನ್ನು ಮನಗಂಡಿರುವ ಶ್ರೀಲಂಕಾ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್, ದೇಹ ಸ್ಪಂದಿಸದಿದ್ದರೆ 2011ರ ವಿಶ್ವಕಪ್ ಮೊದಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವುದಾಗಿ ಹೇಳಿದ್ದಾರೆ.

ನಾಲ್ಕನೇ ಭಾರತ ಪ್ರವಾಸದಲ್ಲಿರುವ ಮುರಳಿಗಿದು ಅಂತಿಮ ವಿದೇಶ ಪ್ರವಾಸವೂ ಹೌದು. ಪ್ರಸಕ್ತ ಸರಣಿಯಲ್ಲಿ ವಿಕೆಟ್ ಪಡೆಯಲು ಹೆಣಗಾಡುತ್ತಿರುವ ಶ್ರೇಷ್ಠ ಸ್ಪಿನ್ನರ್ ಭಾರತೀಯ ಅಗ್ರ ಕ್ರಮಾಂಕದೆದುರು ತನ್ನ ಹಿಂದಿನ ಮ್ಯಾಜಿಕ್ ತೋರಿಸುವಲ್ಲಿ ವಿಫಲರಾಗುತ್ತಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಮುರಳಿ 97 ರನ್ ನೀಡಿ ಮೂರು ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ 124 ರನ್ನುಗಳನ್ನು ನೀಡಿದರೂ ಯಾವುದೇ ವಿಕೆಟ್ ಪಡೆಯುವುದು ಅವರಿಗೆ ಸಾಧ್ಯವಾಗಿರಲಿಲ್ಲ.

ಕಾನ್ಪುರದ ಎರಡನೇ ಟೆಸ್ಟ್‌ನಲ್ಲಿ ತೀರಾ ದುಬಾರಿಯೆನಿಸಿದ ಅವರು 175 ರನ್ ನೀಡಿ ಎರಡು ವಿಕೆಟ್ ಕಿತ್ತಿದ್ದರು. ಒಟ್ಟಾರೆ ಅವರದ್ದು 396 ರನ್ ನೀಡಿ 79.20ರ ಸರಾಸರಿಯಲ್ಲಿ ಐದು ವಿಕೆಟ್ ಪಡೆದಿರುವುದು ಈ ಬಾರಿಯ ಸಾಧನೆ.

ನನಗೀಗ 37 ವರ್ಷ ಪ್ರಾಯ. ಹಾಗಾಗಿ ಈ ಹಿಂದೆ ಬೌಲಿಂಗ್ ಮಾಡುತ್ತಿದ್ದಂತೆ ಈಗಲೂ ಮಾಡಲು ಸಾಧ್ಯವಾಗುತ್ತಿಲ್ಲ. 15-16 ಓವರ್ ಮುಗಿದಾಗ ಆಯಾಸವಾಗುತ್ತದೆ. ಆದರೆ ನಾನು ಕೇವಲ 10 ಓವರ್ ಮಾತ್ರ ಬೌಲಿಂಗ್ ಅವಕಾಶ ಸಿಗುವ ಏಕದಿನ ಕ್ರಿಕೆಟ್‌ನಲ್ಲಿ ಆಡಲು ಯತ್ನಿಸುತ್ತೇನೆ. ಹಾಗೊಂದು ವೇಳೆ ಎಲ್ಲವೂ ಸರಿಯಿಲ್ಲ ಎಂಬುದು ನನಗೆ ಮನದಟ್ಟಾದರೆ ಕ್ರಿಕೆಟ್ ಎರಡೂ ಪ್ರಕಾರಗಳಿಂದ ವಿಶ್ವಕಪ್‌ಗೂ ಮೊದಲೇ ನಿರ್ಗಮಿಸುತ್ತೇನೆ ಎಂದು ಮುರಳಿ ತಿಳಿಸಿದ್ದಾರೆ.

ಎಲ್ಲವೂ ನನ್ನ ದೇಹ ಸ್ಪಂದಿಸುವುದನ್ನು ಅವಲಂಭಿಸಿದೆ. ಟೆಸ್ಟ್ ಕ್ರಿಕೆಟ್ ಈಗೀಗ ನನಗೆ ಕಠಿಣವಾಗುತ್ತಿದೆ. ಯಾಕೆಂದರೆ ಎದುರಾಳಿಗೆ ಪ್ರಮುಖ ಬೆದರಿಕೆಯಾಗಿದ್ದ ನನ್ನ ವಿರುದ್ಧ ಇತರರು ಈಗ ಅತ್ಯುತ್ತಮವಾಗಿ ಬ್ಯಾಟ್ ಬೀಸುತ್ತಿದ್ದಾರೆ. ಮುಂದಿನ ವರ್ಷದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಟೆಸ್ಟ್ ಕ್ರಿಕೆಟಿನಿಂದ ನಿವೃತ್ತಿಯಾಗುವ ನನ್ನ ನಿರ್ಧಾರ ಸರಿಯೆನಿಸುತ್ತಿದೆ ಎಂದು ವಿದಾಯದ ಮಾತುಗಳನ್ನು ಅವರು ಪುನರುಚ್ಛರಿಸಿದರು.

ಟೆಸ್ಟ್ ಕ್ರಿಕೆಟಿನಲ್ಲಿ 800 ವಿಕೆಟುಗಳನ್ನು ಪೂರೈಸಲು ಮುರಳಿಗಿನ್ನು ಬೇಕಾಗಿರುವುದು ಕೇವಲ 12 ವಿಕೆಟುಗಳು ಮಾತ್ರ. ಆದರೆ ತಾನು ವೈಯಕ್ತಿಕ ದಾಖಲೆಗಳನ್ನು ಗುರಿಯಾಗಿರಿಸಿಕೊಂಡಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ