ಶಾರುಖ್ ವಾಂಖೆಡೆ ಪ್ರವೇಶಕ್ಕೆ ಅನುಮತಿಗೆ ಬಿಸಿಸಿಐ ಮನವಿ

ಭಾನುವಾರ, 31 ಮಾರ್ಚ್ 2013 (11:44 IST)
PR
PR
ವಾಂಖೆಡೆ ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ಕೋಲ್ಕತಾ ನೈಟ್‌ರೈಡರ್ ತಂಡದ ಮಾಲೀಕ ಶಾರುಖ್‌ ಖಾನ್‌ ಮೇಲಿನ ಐದು ವರ್ಷ ನಿಷೇಧದ ಸಂಬಂಧ ಚರ್ಚಿಸಲು ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ ಅಧ್ಯಕ್ಷ ರವಿ ಸಾವಂತ್‌ ಅವರು ಭಾರತೀಯ ಕ್ರಿಕೆಟ್‌ ಮಂಡಳಿಯ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ಐಪಿಎಲ್‌ ಪಂದ್ಯದ ವೇಳೆ ಭದ್ರತಾ ಸಿಬಂದಿ ಜತೆ ಜಗಳ ಮತ್ತು ಅಧಿಕಾರಿಗೆ ಬೆದರಿಕೆ ಒಡ್ಡಿದ ಕಾರಣಕ್ಕಾಗಿ ವಾಂಖೆಡೆ ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ಶಾರುಖ್‌ ಖಾನ್‌ ಅವರಿಗೆ ನಿಷೇಧ ಹೇರಲಾಗಿದೆ. ತನ್ನ ವರ್ತನೆಗೆ ಶಾರುಖ್‌ ಕ್ಷಮೆ ಕೇಳಲು ನಿರಾಕರಿಸಿದ್ದರಿಂದ ಎಂಸಿಎ ತನ್ನ ನಿಲುವಿಗೆ ಅಂಟಿಕೊಂಡಿದೆ.

ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ರೈಡರ್ ತಂಡವು ಮೇ 7ರಂದು ಮುಂಬೈ ಇಂಡಿಯನ್ಸ್‌ ತಂಡವನ್ನು ವಾಂಖೆಡೆ ಕ್ರೀಡಾಂಗಣದಲ್ಲಿ ಎದುರಿಸಲಿದೆ. ಈ ಕಾರಣಕ್ಕಾಗಿ ಶಾರುಖ್‌ ಮೇಲೆ ವಿಧಿಸಿದ ನಿಷೇಧವನ್ನು ಪುನರ್ ಪರಿಶೀಲಿಸುವಂತೆ ಬಿಸಿಸಿಐ ಮುಂಬಯಿ ಕ್ರಿಕೆಟ್‌ ಅಸೋಸಿಯೇಶನ್‌ಗೆ ಮನವಿ ಮಾಡಿದೆ.

ವೆಬ್ದುನಿಯಾವನ್ನು ಓದಿ