ಸಚಿನ್, ದ್ರಾವಿಡ್, ಲಕ್ಷ್ಮಣ್ ತ‌ಕ್ಷಣ ನಿವೃತ್ತಿ ಬಯಸಿದ ಕಪಿಲ್ ಪಾಜಿ

ಮಂಗಳವಾರ, 21 ಫೆಬ್ರವರಿ 2012 (02:07 IST)
WD


ಕ್ರಿಕೆಟ್ ಧರ್ಮದ 'ದೇವರು' ಎಂದೇ ವ್ಯಾಖ್ಯಾನಿಸಲ್ಪಡುವ ಸಚಿನ್ ತೆಂಡೂಲ್ಕರ್ ತತ್‌ಕ್ಷಣಕ್ಕೆ ರಾಜೀನಾಮೆ ಕೊಟ್ಟು ತೆರಳಬೇಕು ಎಂದು ಭಾರತದ 1983ರ ಚೊಚ್ಚಲ ಏಕದಿನ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಕಟ್ಟಾಜ್ಞೆ ಹೊರಡಿಸಿದ್ದಾರೆ.

ಇದರ ಸಹಿತ ಟೆಸ್ಟ್ ಕ್ರಿಕೆಟ್‌ನ ಅತ್ಯುನ್ನತ್ತ ಶಿಖರದಲ್ಲಿರುವ 'ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಹಾಗೂ ವೆರಿ ವೆರಿ ಸ್ಪೆಷಲ್ ವಿವಿಎಸ್ ಲಕ್ಷ್ಮಣ್ ಸಹ ಯುವ ಕ್ರಿಕೆಟಿಗರಿಗಾಗಿ ಹಾದಿ ಸುಗಮಗೊಳಿಸಬೇಕು ಎಂದು ಕಪಿಲ್ ಬಯಸಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಸಿಬಿ ಸಿರೀಸ್‌ನಲ್ಲಿ ಸಚಿನ್ ಕಳಪೆ ಪ್ರದರ್ಶನವೇ ಕಪಿಲ್ ಹೇಳಿಕೆಗೆ ಕಾರಣವಾಗಿದೆ. ಈ ತನಕ ನಾಲ್ಕು ಪಂದ್ಯಗಳನ್ನು ಆಡಿರುವ ಲಿಟ್ಲ್‌ ಮಾಸ್ಟರ್ ಕೇವಲ 68 ರನ್ನುಗಳನ್ನಷ್ಟೇ ಗಳಿಸಲು ಶಕ್ತವಾಗಿದ್ದಾರೆ.

2011ರ ವಿಶ್ವಕಪ್ ಕಿರೀಟವನ್ನು ಭಾರತ ಎತ್ತಿಹಿಡಿದಾಗಲೇ ಸಚಿನ್ ನಿವೃತ್ತಿ ಘೋಷಿಸಬೇಕಿತ್ತು ಎಂದು ಹೇಳಿರುವ ಕಪಿಲ್ ಪಾಜಿ, ಸಚಿನ್ ಕಾಲ ಮುಗಿದಿದೆ ಎಂಬ ಸಂಕೇತ ನೀಡಿದ್ದಾರೆ.

ಪ್ರತಿಯೊಬ್ಬ ಕ್ರಿಕೆಟಿಗನಿಗೂ ಅವರದ್ದೇ ಆದ ಸಮಯವಿರುತ್ತದೆ. ಖಂಡಿತವಾಗಿಯೂ ದೇಶಕ್ಕಾಗಿ 22-23 ವರ್ಷಗಳ ಸೇವೆ ಸಲ್ಲಿಸಿರುವ ಸಚಿನ್‌ಗಿಂತ ಮಿಗಿಲಾಗಿ ಮತ್ತೊಬ್ಬ ಕ್ರಿಕೆಟಿಗನಿಲ್ಲ. ಆದರೆ ವಿಶ್ವಕಪ್ ಬಳಿಕ ಸೀಮಿತ ಓವರುಗಳ ಆಟಕ್ಕೆ ನಿವೃತ್ತಿಯನ್ನು ಸಲ್ಲಿಸಬೇಕಿತ್ತು ಎಂದು ಭಾರತದ ಮಾಜಿ ಯಶಸ್ವಿ ಆಲ್‌ರೌಂಡರ್ ಆಟಗಾರನಾಗಿರುವ ಕಪಿಲ್ ದೇವ್ ತಿಳಿಸಿದ್ದಾರೆ.

ದ್ರಾವಿಡ್ ಹಾಗೂ ಲಕ್ಷ್ಮಣ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದಾರೆ ಎಂಬುದು ನನ್ನ ಭಾವನೆ. ಗೌರವಾನ್ವಿತ ವಿದಾಯದ ನಿಟ್ಟಿನಲ್ಲಿ ಕೊನೆಯ ಟೆಸ್ಟ್‌ನ ಅವಕಾಶ ನೀಡಬಹುದಾಗಿದೆ. ಆದರೆ ಯುವ ಕ್ರಿಕೆಟಿಗರಿಗೂ ತಮ್ಮನ್ನು ಸಾಬೀತುಪಡಿಸುವ ಅವಕಾಶವನ್ನು ಹಿರಿಯರು ಮಾಡಿಕೊಡಬೇಕು ಎಂದರು.

ವೆಬ್ದುನಿಯಾವನ್ನು ಓದಿ