ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೇರಿದಂತೆ ಎಲ್ಲ ರಾಷ್ಟ್ರೀಯ ಕ್ರೀಡಾ ಫೇಡರೇಷನ್ಗಳು ರಾಷ್ಟ್ರೀಯ ಕ್ರೀಡಾ ಮಸೂದೆಯಡಿ ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯೊಳಗೆ ಬರಲಿವೆ ಎಂಬ ನೂತನ ಕಾನೂನಿಗೆ ಭಾರತದ ಮಾಜಿ ನಾಯಕರುಗಳಾದ ಕಪಿಲ್ ದೇವ್ ಹಾಗೂ ಮೊಹಮ್ಮದ್ ಅಜರುದ್ದೀನ್ ಸಹಮತ ವ್ಯಕ್ತಪಡಿಸಿದ್ದಾರೆ.
ಈ ನೂತನ ಮಸೂದೆ ಸಂಪುಟ ಚರ್ಚೆಗೆ ಬರಲಿದ್ದು, ಅಲ್ಲಿ ಅನುಮೋದನೆ ದೊರಕಿದ್ದಲ್ಲಿ ಆನಂತರ ಸಂಸತ್ನಲ್ಲಿ ಮಂಡನೆಯಾಗಲಿದೆ. ಆದರೆ ಮಸೂದೆಗೆ ಬಿಸಿಸಿಐ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ತೀವ್ರ ವಿರೋಧವನ್ನು ವ್ಯಕ್ತಪಡಿಸಿವೆ.
ಒಂದು ವೇಳೆ ಸರಕಾರ ಕಾನೂನು ನಿರ್ಮಿಸಿದರೆ ಬಿಸಿಸಿಐ ಅದರ ನಿರ್ದೇಶನವನ್ನು ಪಾಲಿಸಬೇಕಾಗುತ್ತದೆ. ಆದರೆ ಸರಕಾರದ ಮೇರೆಯಲ್ಲಿಯೇ ಮಂಡಳಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಭರವಸೆಯಿದೆ ಎಂದು ಭಾರತದ ಚೊಚ್ಚಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ತಿಳಿಸಿದ್ದಾರೆ.
ಮತ್ತೊಂದೆಡೆ ಕಾನೂನಿನ ನಿಬಂಧನೆಯಿಂದ ಮಂಡಳಿಗೆ ವಿನಾಯಿತಿ ನೀಡುವಂತಿಲ್ಲ ಎಂದು ಮಾಜಿ ನಾಯಕ ಹಾಗೂ ಕಾಂಗ್ರೆಸ್ ಸಂಸದರಾಗಿರುವ ಅಜರುದ್ದೀನ್ ತಿಳಿಸಿದ್ದಾರೆ.
ಹೀಗಿದ್ದರೂ ಕೇಂದ್ರದ ಈ ನಿರ್ಧಾರಕ್ಕೆ ಬಿಸಿಸಿಐ ಮೂಲಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನಾನು ಕರಡು ಪ್ರತಿಯನ್ನು ಗಮನಿಸಿಲ್ಲ. ಮೊದಲು ಅದನ್ನು ತೋರಿಸಿ. ಸರಕಾರದಿಂದ ಯಾವುದೇ ಅನುದಾನ ಪಡೆಯದ ಹೊರತು ಮಂಡಳಿ ಹೇಗೆ ಆರ್ಟಿಐ ವ್ಯಾಪ್ತಿಗೆ ಒಳಪಡಲು ಸಾಧ್ಯ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಪ್ರಶ್ನಿಸಿದ್ದಾರೆ.
ಮತ್ತೊಂದೆಡೆ ಕಪಿಲ್ ಹೇಳಿಕೆಗೆ ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಸಹ ಕೈ ಜೋಡಿಸಿದ್ದಾರೆ. ಬಿಸಿಸಿಐ ಉತ್ತಮ ಕಾರ್ಯ ನಿರ್ವಹಣೆ ಮಾಡಿದೆ. ಆದರೂ ಸರಕಾರ ಏನಾದರೂ ಕಾನೂನು ನಿರ್ಮಿಸಿದರೆ ವೈಯಕ್ತಿಕ ಹಾಗೂ ವೈಯಕ್ತಿಕ ಮಂಡಳಿಯನ್ನು ಹೊರತುಪಡಿಸುವಂತಿಲ್ಲ. ಯಾಕೆಂದರೆ ಕ್ರೀಡೆಗಳೆಲ್ಲವೂ ಒಂದೇ. ಎಲ್ಲ ಕ್ರೀಡಾ ಮಂಡಳಿಗಳನ್ನು ಅಧೀನತೆಗೆ ತರುವಂತಹ ಮಸೂದೆ ರೂಪಿಸಿದ್ದಲ್ಲಿ ಅದರಲ್ಲಿ ಏನಾದರೂ ತಪ್ಪಿದೆ ಎಂದು ನನಗನಿಸುತ್ತಿಲ್ಲ ಎಂದಿದ್ದಾರೆ.
ಮಂಡಳಿ ಯಾಕೆ ಭಯಪಟ್ಟುಕೊಳ್ಳಬೇಕು. ಕ್ರೀಡೆಯನ್ನು ಪ್ರೋತ್ಸಾಹಿಸಬಾರದು ಅಥವಾ ನಿಯಮದಲ್ಲಿ ಬದಲಾವಣೆ ಮಾಡಲು ಮಂಡಳಿ ಬಯಸುತ್ತಿಲ್ಲ. ಬದಲಾಗಿ ಮತ್ತಷ್ಟು ಪಾರದರ್ಶಕತೆಯಿಂದ ನಡೆದುಕೊಳ್ಳುವಂತೆ ಉತ್ತೇಜನ ನೀಡುತ್ತಿದೆ ಎಂದಿದ್ದಾರೆ.