6 ಕ್ಯಾಚ್‌ಗಳನ್ನು ಕೈಚೆಲ್ಲಿದ ಫೀಲ್ಡರುಗಳು: ಭಾರತದ ನೆರವಿಗೆ ಮಳೆರಾಯ

ಬುಧವಾರ, 23 ಅಕ್ಟೋಬರ್ 2013 (21:33 IST)
PR
PR
ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಲ್ಕನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಮಳೆರಾಯ ಅಡ್ಡಿಮಾಡಿದ್ದರಿಂದ ರದ್ದುಪಡಿಸಲಾಗಿದೆ. ರಾಂಚಿಯಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಅಂಪೈರ್‌ಗಳು ಮೈದಾನವನ್ನು ಪರೀಕ್ಷಿಸಿ ಪಿಚ್ ಆಡಲು ಯೋಗ್ಯವಲ್ಲವೆಂದು ತೀರ್ಮಾನಿಸಿ ಆಟವನ್ನು ರದ್ದುಮಾಡಿದರು. ಇದರಿಂದ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆಯನ್ನು ಕಾಯ್ದುಕೊಂಡಿದೆ. ಆಸ್ಟ್ರೇಲಿಯಾದ 296 ರನ್ ಗುರಿಯನ್ನು ಬೆನ್ನಟ್ಟಿದ ಭಾರತ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದಾಗ 4.1 ಓವರುಗಳಲ್ಲಿ 27 ರನ್ ಸ್ಕೋರ್ ಮಾಡಿದ್ದರು.

9.15ಕ್ಕೆ ಆಟವನ್ನು ಮುಂದುವರಿಸಿ 20 ಓವರುಗಳಿಗೆ ಇಳಿಸುವ ಸಾಧ್ಯತೆಯಿತ್ತು. ಭಾರತ 150 ರನ್ ಹೊಡೆಯುವ ಗುರಿಯನ್ನು ಇರಿಸಲಾಗಿತ್ತು. ಆದರೆ ಪಿಚ್ ಒದ್ದೆಯಾಗಿದ್ದರಿಂದ ಆಟವನ್ನು ರದ್ದುಪಡಿಸಲಾಯಿತು.ಇದಕ್ಕೆ ಮೊದಲು ಆಸ್ಟ್ರೇಲಿಯಾ ಪರ ಜಾರ್ಜ್ ಬೈಲಿ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ನಡುವೆ 153 ರನ್ ಜತೆಯಾಟದಿಂದ ಆಸ್ಟ್ರೇಲಿಯಾಕ್ಕೆ 295 ರನ್‌ಗಳ ಸವಾಲಿನ ಮೊತ್ತವನ್ನು ಹಾಕಿದರು.

PR
PR
ನಾಯಕ ಬೈಲಿ 98 ರನ್ ಮತ್ತು ಮ್ಯಾಕ್ಸ್‌ವೆಲ್ 92 ರನ್‌ ಗಳಿಸಿ ಶತಕವಂಚಿತರಾದರೂ ಆಸ್ಟ್ರೇಲಿಯಾ ಚೇತರಿಸಿಕೊಳ್ಳಲು ನೆರವಾದರು. ಮಹಮ್ಮದ್ ಶಾಮಿಯ ಪರಿಣಾಮಕಾರಿ ಬೌಲಿಂಗ್ (6ಓವರುಗಳಲ್ಲಿ 3 ವಿಕೆಟ್) ಆಸ್ಟ್ರೇಲಿಯಾದ ಮೇಲಿನ ಕ್ರಮಾಂಕವನ್ನು ನುಚ್ಚುನೂರು ಮಾಡಿತು.ಆದರೆ ಭಾರತ ತಂಡದ ಕಳಪೆ ಫೀಲ್ಡಿಂಗ್ ಆಸೀಸ್‌ ಆಟಗಾರರಿಗೆ ವರದಾನವಾಯಿತು. ಭಾರತ ಫೀಲ್ಡರುಗಳು ಸುಮಾರು 6 ಕ್ಯಾಚ್‌ಗಳನ್ನು ಡ್ರಾಪ್ ಮಾಡಿ ಆಸಿಸ್‌ ಬೃಹತ್ ಸ್ಕೋರಿಗೆ ನೆರವಾದರು. ಬೈಲಿ ಎರಡು ಬಾರಿ ಜೀವದಾನ ಪಡೆದರೆ ಮ್ಯಾಕ್ಸ್‌ವೆಲ್ ಕೂಡ ಎರಡು ಜೀವದಾನ ಪಡೆದರು.

ಮಿಚೆಲ್ ಜಾನ್ಸನ್ 15 ರನ್ ಗಳಿಸಿದ್ದಾಗ ರೈನಾ ಕ್ಯಾಚ್ ಕೈಬಿಟ್ಟರು. ಇನ್ನಿಂಗ್ಸ್ ಕೊನೆಯ ಚೆಂಡಿನಲ್ಲಿ ಶಿಖರ್ ಧವನ್ ಜೇಮ್ಸ್ ಫಾಲ್ಕನರ್ ಕ್ಯಾಚ್ ಬಿಟ್ಟರು. ಒಟ್ಟಿನಲ್ಲಿ ಕಳಪೆ ಫೀಲ್ಡಿಂಗ್ ಆಸಿಸ್ ಸ್ಪರ್ಧಾತ್ಮಕ ಸ್ಕೋರು ಪೇರಿಸಲು ನೆರವಾಯಿತು.

ವೆಬ್ದುನಿಯಾವನ್ನು ಓದಿ