ಸೌರವ್ ಗಂಗೂಲಿ ನನ್ನ ಅಚ್ಚುಮೆಚ್ಚಿನ ನಾಯಕ: ಯುವರಾಜ್ ಸಿಂಗ್

ಶನಿವಾರ, 25 ಅಕ್ಟೋಬರ್ 2014 (18:25 IST)
ಫಾರಂನಲ್ಲಿಲ್ಲದ ಮತ್ತು ಟೀಂಇಂಡಿಯಾದ ಏಕದಿನ ಪಂದ್ಯಾವಳಿಗೆ ಮತ್ತೆ ಮರಳುವ ಭರವಸೆ ಇಟ್ಟುಕೊಂಡಿರುವ ಯುವರಾಜ್ ಸಿಂಗ್ ತಾವು ಸೌರವ್ ಗಂಗೂಲಿ ನಾಯಕತ್ವದಲ್ಲಿ ಹೆಚ್ಚಾಗಿ ಅರಳಿದ್ದಾಗಿ ತಿಳಿಸಿದ್ದು, ತಾವು ಆಡಿದ ನಾಯಕರಲ್ಲಿ ಸೌರವ್ ಗಂಗೂಲಿ ನೆಚ್ಚಿನವರು ಎಂದು ಹೇಳಿದ್ದಾರೆ.
 
 ಯುವರಾಜ್ ಮಾಧ್ಯಮದ ಜೊತೆ ಮಾತನಾಡುತ್ತಾ, ಮೈದಾನದ ಹೊರಗೆ ಮತ್ತು ಮೈದಾನದ ಒಳಗಿನ ವಿಷಯಗಳನ್ನು ಎತ್ತಿಕೊಂಡು ಮಾತನಾಡಿದರು. ವಿಶೇಷವಾಗಿ ಜೀವಕ್ಕೆ ಬೆದರಿಕೆಯೊಡ್ಡಿದ ಕ್ಯಾನ್ಸರ್ ಮತ್ತು ಕ್ರಿಕೆಟ್ ವೃತ್ತಿಜೀವನದ ಬಗ್ಗೆ ಮಾತನಾಡಿದರು.ಶ್ವಾಸಕೋಶದ ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿದ್ದು, ನನ್ನ ಜೀವನದ ಅತ್ಯಂತ ಕಠಿಣ ಹಂತ ಎಂದು ಹೇಳಿದರು.
 
 ನನ್ನ ಮೆಚ್ಚಿನ ನಾಯಕ ಗಂಗೂಲಿ. ಅವರಿಂದ ನನ್ನ ವೃತ್ತಿಜೀವನದಲ್ಲಿ ಅನೇಕ ವಿಷಯ ಕಲಿತೆ.ನಾವು ವಿದೇಶದಲ್ಲಿ ಸರಣಿ ಗೆಲ್ಲಬಹುದೆಂಬ ಭಾವನೆಯನ್ನು ಅವರು ಹುಟ್ಟುಹಾಕಿದರು ಎಂದು ಹೇಳಿದ್ದಾರೆ. ಭಾರತಕ್ಕೆ ವಿಶ್ವ ಕಪ್ ಗೆಲ್ಲಿಸಿಕೊಟ್ಟ ಕೋಚ್ ಗ್ಯಾರಿ ಕಿರ್ಸ್ಟನ್ ಅವರ ಮಾರ್ಗದರ್ಶನದಲ್ಲಿ ತಾನು ಕೌಶಲ್ಯ ವೃದ್ಧಿಸಿಕೊಂಡಿದ್ದಾಗಿ ಯುವರಾಜ್ ಹೇಳಿದ್ದಾರೆ. ಪ್ರಸ್ತುತ ಭಾರತದ ನಾಯಕ ಧೋನಿಯನ್ನು ಕೂಡ ಶ್ಲಾಘಿಸಿದ ಅವರು, ಎಲ್ಲ ಮೂರು ಸ್ವರೂಪದ ಆಟಗಳಲ್ಲಿ ಅವರು ಶ್ಲಾಘನೀಯ ಕೆಲಸ ಮಾಡಿದ್ದು,ಅವರನ್ನು ಬದಲಿಸುವ ಅಗತ್ಯವಿಲ್ಲ ಎಂದು ನುಡಿದರು. 

ವೆಬ್ದುನಿಯಾವನ್ನು ಓದಿ