ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ವಿಕೆಟ್ ಕೀಪರ್ ಗಳೊಳಗೇ ಪೈಪೋಟಿ!

ಬುಧವಾರ, 1 ಫೆಬ್ರವರಿ 2017 (09:49 IST)
ಮುಂಬೈ: ಎಲ್ಲರೂ ಇದನ್ನು ಬಹುಶಃ ಮರೆತೇ ಬಿಟ್ಟಿದ್ದಾರೆ. ಕ್ರಿಕೆಟ್ ಪ್ರಿಯರು ಎದುರು ನೋಡುತ್ತಿರುವುದು ಆಸ್ಟ್ರೇಲಿಯಾ ಸರಣಿಯನ್ನೇ. ಅದಕ್ಕಿಂತ ಮೊದಲು ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಏಕಮಾತ್ರ ಟೆಸ್ಟ್ ಸರಣಿಗೆ ಭಾರತ ತಂಡದೊಳಗೇ ನಡೆದಿದೆ.

 
ಅರೇ ಏನಾಯಿತು? ಟೀಂ ಇಂಡಿಯಾ ಆಟಗಾರರಲ್ಲಿ ಒಡಕು ಮೂಡಿತೇ ಎಂದು ಗಾಬರಿಯಾಗಬೇಡಿ. ಅಸಲಿಗೆ ಈಗ ಭಾರತ ತಂಡಕ್ಕೆ ವಿಕೆಟ್ ಕೀಪರ್ ಆಗಿ ಯಾರನ್ನು ಆಯ್ಕೆ ಮಾಡುವುದು ಎಂಬ ಸಂಕಟ ಆಯ್ಕೆ ಸಮಿತಿಯದ್ದಾಗಿತ್ತು. ಇಂಗ್ಲೆಂಡ್ ಸರಣಿಯಲ್ಲಿ ಉತ್ತಮವಾಗಿ ಆಡಿದ ಪಾರ್ಥಿವ್ ಪಟೇಲ್ ರನ್ನು ಆಯ್ಕೆ ಮಾಡುವುದೋ, ಖಾಯಂ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾಗೆ ಮಣೆ ಹಾಕುವುದೋ ಎಂಬ ತಲೆನೋವು ಕಾಡಿತ್ತು.

ಆದರೆ ನಿನ್ನೆ ಸಭೆ ಸೇರಿದ ಆಯ್ಕೆ ಸಮಿತಿ ಪಾರ್ಥಿವ್ ಗೆ ಕೊಕ್ ನೀಡಿ ಸಹಾರನ್ನು ಆಯ್ಕೆ ಮಾಡಿದೆ. ಅಚ್ಚರಿಯೆಂದರೆ ತಮಿಳುನಾಡಿನ ಅಭಿನವ್ ಮುಕುಂದ್ ಗೆ ಬುಲಾವ್ ನೀಡಲಾಗಿದೆ. ಸ್ಪಿನ್ ಧ್ವಯರಾದ ರವಿಚಂದ್ರನ್ ಅಶ್ವಿನ್,  ರವೀಂದ್ರ ಜಡೇಜಾ ಜತೆಗೆ ಅಮಿತ್ ಮಿಶ್ರಾಗೂ ಸ್ಥಾನ ಕಲ್ಪಿಸಲಾಗಿದೆ. ಕರ್ನಾಟಕದ ಕೆಎಲ್ ರಾಹುಲ್, ಕರುಣ್ ನಾಯರ್ ಸ್ಥಾನ ಪಡೆದಿದ್ದಾರೆ. ತಂಡದ ವಿವರ ಇಂತಿದೆ.

ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್,  ಮುರಳಿ ವಿಜಯ್, ಚೇತೇಶ್ವರ ಪೂಜಾರ, ಅಜಿಂಕ್ಯ ರೆಹಾನೆ, ವೃದ್ಧಿಮಾನ್ ಸಹಾ, ರವಿಚಂದ್ರನ್ ಅಶ್ವಿನ್,  ರವೀಂದ್ರ ಜಡೇಜಾ,  ಜಯಂತ್ ಯಾದವ್,  ಅಮಿತ್ ಮಿಶ್ರಾ, ಇಶಾಂತ್ ಶರ್ಮಾ,  ಭುವನೇಶ್ವರ ಕುಮಾರ್, ಅಭಿನವ್ ಮುಕುಂದ್,  ಉಮೇಶ್ ಯಾದವ್, ಕರುಣ್ ನಾಯರ್,  ಹಾರ್ದಿಕ್ ಪಾಂಡ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ