ಧೋನಿಗೆ ವಿರಾಟ್ ಕೊಹ್ಲಿ ತಂಡಕ್ಕೆ ಆಯ್ಕೆಯಾಗುವುದೇ ಬೇಕಿರಲಿಲ್ಲವಂತೆ!

ಗುರುವಾರ, 8 ಮಾರ್ಚ್ 2018 (15:03 IST)
ಮುಂಬೈ: ವಿರಾಟ್ ಕೊಹ್ಲಿ ಇಂದು ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿರಬಹುದು. ಟೀಂ ಇಂಡಿಯಾದ ನಾಯಕನಾಗಿರಬಹುದು. ಆದರೆ ಒಂದು ಕಾಲದಲ್ಲಿ ಅವರು ತಂಡಕ್ಕೆ ಆಯ್ಕೆಯಾಗುವುದೇ ನಾಯಕ ಧೋನಿಗೆ ಇಷ್ಟವಿರಲಿಲ್ಲವಂತೆ!

ಹೀಗೊಂದು ಸ್ಪೋಟಕ ಮಾಹಿತಿಯನ್ನು ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ದಿಲೀಪ್ ವೆಂಗಸರ್ಕಾರ್ ಹೊರ ಹಾಕಿದ್ದಾರೆ. ಅಂದಿನ ಕೋಚ್ ಗ್ಯಾರಿ ಕಸ್ಟರ್ನ್ ಮತ್ತು ಧೋನಿ ತಂಡಕ್ಕೆ ಕೊಹ್ಲಿ ಆಯ್ಕೆ ಮಾಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರಂತೆ.

‘ಆಗಷ್ಟೇ ಉದಯೋನ್ಮುಖ ಆಟಗಾರರ ಆಸ್ಟ್ರೇಲಿಯಾ ಪ್ರವಾಸ ನಡೆದಿತ್ತು.  ವೆಸ್ಟ್ ಇಂಡೀಸ್ ವಿರುದ್ಧ ಎಲ್ಲರೂ ವಿಫಲರಾಗಿದ್ದಾಗ ವಿರಾಟ್ ಮಾತ್ರ 123 ರನ್ ಹೊಡೆದು ಸೈ ಎನಿಸಿದ್ದರು. ಆಗಲೇ ನಾನು ಈ ಹುಡುಗನನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಲೆಕ್ಕಾಚಾರ ಹಾಕಿದ್ದೆ. ಅದರಂತೆ ಮುಂದಿನ ಲಂಕಾ ಪ್ರವಾಸಕ್ಕೆ ತಂಡದ ಆಯ್ಕೆ ಮಾಡಲು ಕುಳಿತಿದ್ದೆವು.

ಆಯ್ಕೆಗಾರರ ಪೈಕಿ ನಾಲ್ವರು ವಿರಾಟ್ ಆಯ್ಕೆ ಮಾಡುವ ನನ್ನ ನಿರ್ಧಾರಕ್ಕೆ ಒಪ್ಪಿದ್ದರು. ಆದರೆ ಧೋನಿ ಮತ್ತು ಗ್ಯಾರಿ ಒಪ್ಪಲಿಲ್ಲ. ಅವರಿಗೆ ಚೆನೈ ಸೂಪರ್ ಕಿಂಗ್ಸ್ ತಂಡದ ಎಸ್ ಬದರಿನಾಥ್ ಆಯ್ಕೆ ಮಾಡಬೇಕೆಂದಿತ್ತು. ಕೊಹ್ಲಿ ಹೇಗೆ ಬ್ಯಾಟ್ ಮಾಡುತ್ತಾರೆಂದು ನಾವು ನೋಡಿಲ್ಲ ಎಂಬುದು ಅವರ ವಾದ.

ಅಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಚೆನ್ನೈ ತಂಡದ ಮಾಲಿಕ ಎನ್ ಶ್ರೀನಿವಾಸನ್ ಕೂಡಾ ತಮ್ಮ ಹುಡುಗ ಬದರಿನಾಥ್ ರನ್ನು ಕೈಬಿಟ್ಟಿದ್ದಕ್ಕೆ ವಿವರಣೆ ಕೇಳಿದ್ದರು. ನಮ್ಮ ನಡುವೆ ಇದೇ ಕಾರಣಕ್ಕೆ ವಾಗ್ವಾದವೇ ನಡೆಯಿತು. ಮರುದಿನವೇ ಶ್ರೀಕಾಂತ್ ಆಯ್ಕೆ ಸಮಿತಿ ಮುಖ್ಯಸ್ಥರಾದರು. ನನ್ನ ಅವಧಿ ಮುಗಿದಿತ್ತು!’ ಎಂದು ದಿಲೀಪ್ ವೆಂಗ್ಸರ್ಕಾರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ