ಟಾಸ್ ಗೆದ್ದ ಕೊಹ್ಲಿ ಕೋಲ್ಕತ್ತಾ ತಂಡವನ್ನು ಬ್ಯಾಟಿಂಗ್ಗಿಳಿಸಿದರು. ತಂಡಕ್ಕೆ ಉತ್ತಮ ಆರಂಭ ನೀಡಿದ ಕನ್ನಡಿಗ ರಾಬಿನ್ ಉತ್ತಪ್ಪ ಹಾಗೂ ನಾಯಕ ಗಂಭೀರ್ ಜತೆಯಾಗಿ 81 ರನ್ ಕಲೆ ಹಾಕಿದರು. ಗಂಭೀರ್ 58 ರನ್ ಬಾರಿಸಿ ಔಟಾದ ಬಳಿಕ ಪಾಂಡೆ (23) ಅಬ್ಬರಿಸಿದರಾದರೂ ರನ್ ಔಟ್ ಆಗಿ ಮರಳಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ (11) ಮತ್ತು ಯುಸೂಫ್ ಪಠಾಣ(3)ನಿರಾಶೆ ಮೂಡಿಸಿದರು. ಕೊನೆಯಲ್ಲಿ ಭರ್ಜರಿ ಆಟ ಪ್ರದರ್ಶಿಸಿದ ಆ್ಯಂಡ್ರೆ ಔಟಾಗದೇ 41 ರನ್ ಗಳಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ 178 ರನ್’ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ಆರಂಭದಿಂದಲೇ ಇಕ್ಕಟ್ಟಿಗೆ ಸಿಲುಕಿತು. ನಾಯಕ ವಿರಾಟ್ ಕೊಹ್ಲಿ ಕೇವಲ 13 ರನ್ಗೆ ಪೆವಿಲಿಯನ್ಗೆ ಮರಳಿದರೆ, ದಿನೇಶ್ ಕಾರ್ತಿಕ್, ಮನದೀಪ್ ಸಿಂಗ್ ತಲಾ 6ರ ಅಂಕಿಗೆ ಬ್ಯಾಟ್ ಕೆಳಗಿಸಿದರು.
ಆದರೆ ಏಕಾಂಗಿಯಾಗಿ ಹೋರಾಟ ನಡೆಸಿದ ಕ್ರಿಸ್ ಗೇಲ್ ತಮ್ಮ ಎಂದಿನ ಶೈಲಿಯಲ್ಲಿ ಸಿಡಿದು ನಿಂತರು. ನೈಟ್ ರೈಡರ್ಸ್ ಬೌಲಿಂಗ್ನ ಚಿಂದಿ ಉಡಾಯಿಸಿದ ಅವರು 56 ಎಸೆತಗಳಲ್ಲಿ 96 ರನ್ ಗಳಿಸಿದರು. ಏಳು ಬೌಂಡರಿ ಮತ್ತು ಏಳು ಭರ್ಜರಿ ಸಿಕ್ಸರ್ಗಳನ್ನು ಸಿಡಿಸಿದ ಅವರು ಆರ್ಸಿಬಿಯನ್ನು ಗೆಲುವಿನ ದಡಕ್ಕೆ ಸೇರಿಸುತ್ತಿದ್ದಾರೆ ಎನ್ನುವಷ್ಟರಲ್ಲಿ ರನ್ ಔಟ್ ಆಗಿ ವಾಪಸ್ಸಾದರು. ನಂತರ ಬಂದ ಬಾಲಂಗೋಚಿಗಳು ವಿರಾಟ್ ಅವರನ್ನು ನಿರಾಶೆಗೊಳಿಸಲಿಲ್ಲ. ಇನ್ನೊಂದು ಓವರ್ ಬಾಕಿ ಇರುವಂತೆಯೇ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿ ಬೆಂಗಳೂರು ಗೆಲುವನ್ನು ತನ್ನದಾಗಿಸಿಕೊಂಡಿತು.