ರಣಜಿ ಟ್ರೋಫಿಯಲ್ಲಿ ತವರು ತಂಡವನ್ನು ಗೆಲ್ಲಿಸುವ ಪಣ ತೊಟ್ಟಿರುವ ಎಂಎಸ್ ಧೋನಿ

ಸೋಮವಾರ, 2 ಜನವರಿ 2017 (10:18 IST)
ರಾಂಚಿ: ಭಾರತದ ಸೀಮಿತ ಓವರ್ ಗಳ ಪಂದ್ಯಗಳ ನಾಯಕ ಎಂಎಸ್ ಧೋನಿ ರಣಜಿ ಟ್ರೋಫಿಯಲ್ಲಿ ತಮ್ಮ ತವರು ಜಾರ್ಖಂಡ್ ಗೆಲುವಿಗೆ ಪಣ ತೊಟ್ಟಿದ್ದಾರೆ.  ತಮಿಳುನಾಡು ವಿರುದ್ಧ ನಡೆಯುತ್ತಿರುವ ಸೆಮಿಫೈನಲ್ ಪಂದ್ಯದ ವೇಳೆಗೆ ತಂಡದ ಜತೆಗೇ ಡ್ರೆಸ್ಸಿಂಗ್ ರೂಂನಲ್ಲಿ ಕಾಲ ಕಳೆದಿದ್ದಾರೆ.


ಕಾಲ ಕಳೆದಿರುವುದು ಮಾತ್ರವಲ್ಲ, ಕೋಚ್ ರಾಜೀವ್ ಕುಮಾರ್, ನಾಯಕ ಸೌರಬ್ ತಿವಾರಿ ಜತೆಗೆ ಚರ್ಚೆ ನಡೆಸಿದ್ದಾರೆ. ಧೋನಿ ತಂಡದಲ್ಲಿ ಅಧಿಕೃತವಾಗಿ ಇಲ್ಲದಿದ್ದರೂ, ಟೀಂ ಮ್ಯಾನೇಜ್ ಮೆಂಟ್ ಧೋನಿಗೆ ಡ್ರೆಸ್ಸಿಂಗ್ ರೂಂ ಒಳಗೆ ಪ್ರವೇಶ ನೀಡುವ ಐಡಿ ಕಾರ್ಡ್ ನೀಡಿದೆ.

ಇದರಿಂದಾಗಿ ಧೋನಿ ಆಟಗಾರರ ಜತೆಗೂ ಸಂವಹನ ನಡೆಸಲು ಸಾಧ್ಯವಾಗಿದೆ. ಬಿಡುವಿನ ಸಮಯ ಸಿಕ್ಕಾಗಲೆಲ್ಲಾ ಕೋಚ್ ಮತ್ತು ನಾಯಕನ ಜತೆಗೆ ಧೋನಿ ಚರ್ಚಿಸುತ್ತಿದ್ದುದು ಕಂಡು ಬಂತು. ಇದೇ ಮೊದಲ ಬಾರಿಗೆ ರಣಜಿ ಸೆಮಿಫೈನಲ್ ಪ್ರವೇಶಿಸಿದ ತಂಡಕ್ಕೆ ಅವರು ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಉಪಸ್ಥಿತಿ ತಂಡಕ್ಕೆ ಬಲ ನೀಡಲಿದೆ ಎಂಬುದು ತಂಡದ ಅಭಿಪ್ರಾಯ.

ಜನವರಿ 5 ರಂದು ಇಂಗ್ಲೆಂಡ್ ಏಕದಿನ ಸರಣಿಗೆ ಭಾರತ ತಂಡದ ಆಯ್ಕೆಯೂ ನಡೆಯಲಿದ್ದು, ಈ ಹಿನ್ನಲೆಯಲ್ಲಿ ರಣಜಿಯಲ್ಲಿ ಧೋನಿಯನ್ನು ಇಂಪ್ರೆಸ್ ಮಾಡಿದರೆ ತವರಿನ ಆಟಗಾರರಿಗೆ ಧೋನಿ ಚಾನ್ಸ್ ನೀಡದೇ ಇರಲಿಕ್ಕಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ