ಎಂಎಸ್ ಧೋನಿಯದ್ದು ಪಕ್ಕಾ ಟೈಮಿಂಗ್, ವಿರಾಟ್ ಕೊಹ್ಲಿ ಪಟ್ಟಾಭಿಷೇಕಕ್ಕೆ ರೆಡಿ ಎಂದ ಆಯ್ಕೆ ಸಮಿತಿ ಅಧ್ಯಕ್ಷ

ಶುಕ್ರವಾರ, 6 ಜನವರಿ 2017 (10:08 IST)
ಮುಂಬೈ: ಸೀಮಿತ ಓವರ್ ಗಳ ಪಂದ್ಯದ ನಾಯಕತ್ವಕ್ಕೆ ಎಂಎಸ್ ಧೋನಿ ಸರಿಯಾದ ಸಮಯಕ್ಕೇ ನಿವೃತ್ತಿ ಹೇಳಿದ್ದಾರೆ. ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎಲ್ಲಾ ಮಾದರಿಯ ಪಂದ್ಯಗಳಿಗೆ ನಾಯಕರಾಗಲು ಸಿದ್ಧರಾಗಿದ್ದಾರೆ ಎಂದು ಟೀಂ ಇಂಡಿಯಾ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್ ಹೇಳಿದ್ದಾರೆ.


ಅಲ್ಲಿದೆ ಇಂದು ನಡೆಯಲಿರುವ ಆಯ್ಕೆ ಸಮಿತಿ ಸಭೆಯಲ್ಲಿ ವಿರಾಟ್ ಕೊಹ್ಲಿಗೆ ಪಟ್ಟಾಭಿಷೇಕ ಮಾಡುವುದು ಪಕ್ಕಾ ಆಗಿದೆ. ಇಂದು ಇಂಗ್ಲೆಂಡ್ ಸರಣಿಗೆ ಭಾರತ ತಂಡದ ಆಯ್ಕೆ ನಡೆಯಲಿದೆ. ಒಂದು ವೇಳೆ ಧೋನಿ ಒಂದು ವರ್ಷದ ಹಿಂದೆ ಈ ನಿರ್ಧಾರಕ್ಕೆ ಬಂದಿದ್ದರೆ ನನಗೆ ಚಿಂತೆಯಾಗುತ್ತಿದೆ. ಆದರೆ ಈಗ ಕೊಹ್ಲಿ ಸಂಪೂರ್ಣ ನಾಯಕರಾಗಲು ಸಿದ್ಧರಾದ ಮೇಲೆಯೇ ಸಮಯ ನೋಡಿಕೊಂಡು ಅವರು ನಿವೃತ್ತಿ ಹೇಳಿದ್ದಕ್ಕೆ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪ್ರಸಾದ್ ಹೇಳಿದ್ದಾರೆ.

ಇಂದು ನಡೆಯಲಿರುವ ತಂಡದ ಆಯ್ಕೆಯಲ್ಲಿ ಧೋನಿಗೆ ಆಟಗಾರನಾಗಿ ಅವಕಾಶ ಸಿಗಲಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ. ಧೋನಿಯಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದುಕೊಂಡಿದೆ. ಒಬ್ಬ ಆಟಗಾರನಾಗಿ ಅವರು ತಂಡಕ್ಕೆ ಇನ್ನೂ ಕೊಡುಗೆ ನೀಡುವುದು ಬಾಕಿಯಿದೆ ಎಂದು ಪ್ರಸಾದ್ ಹೇಳಿರುವುದು ಇದರ ಸೂಚನೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ