ಟೀಂ ಇಂಡಿಯಾ ಬಾಗಿಲು ತಟ್ಟುತ್ತಿರುವವರು ಯಾರು?

ಸೋಮವಾರ, 8 ಮೇ 2017 (08:15 IST)
ಮುಂಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭಾಗವಹಿಸಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದ ಮೇಲೆ ಟೀಂ ಇಂಡಿಯಾದ ಬಾಗಿಲು ತಟ್ಟುತ್ತಿರುವ ಆಟಗಾರರಲ್ಲಿ ಹೊಸ ಭರವಸೆ ಮೂಡಿದೆ.

 
ಹರ್ಭಜನ್ ಸಿಂಗ್, ಆಶಿಷ್ ನೆಹ್ರಾ, ಮೊಹಮ್ಮದ್ ಶಮಿ, ಶಿಖರ್ ಧವನ್ ಮತ್ತೊಂದು ಅವಕಾಶ ಸಿಗಬಹುದೇ ಎಂದು ಕಾಯುತ್ತಿದ್ದರೆ, ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿದ್ದಾರೆ.

ಇವರ ಪೈಕಿ ಹರ್ಭಜನ್ ಸಿಂಗ್ ಆಯ್ಕೆಯಾಗುವ ಭರವಸೆಯಲ್ಲಿದ್ದಾರೆ. ‘ನಾನು ಈ ಋತುವಿನಲ್ಲಿ ಎಲ್ಲಾ ನಿಗದಿತ ಓವರ್ ಪಂದ್ಯಗಳನ್ನು ಆಡಿದ್ದೇನೆ. ಆಯ್ಕೆಯಾಗುವ ಭರವಸೆಯಲ್ಲಿದ್ದೇನೆ’ ಎಂದು ಭಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅತ್ತ ಭರ್ಜರಿ ಫಾರ್ಮ್ ನಲ್ಲಿರುವ ರಿಷಬ್ ಪಂತ್ ಆಯ್ಕೆ ಬಹುತೇಕ ಖಚಿತ. ಅವರ ಜತೆಗೆ ಉತ್ತಮ ಪ್ರದರ್ಶನ ತೋರಿದ ಸಂಜು ಸ್ಯಾಮ್ಸನ್ ಧೋನಿ ಜತೆಗೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ಗಾಯಗೊಂಡಿದ್ದ ರವಿಚಂದ್ರನ್ ಅಶ್ವಿನ್,  ರವೀಂದ್ರ ಜಡೇಜಾ ಫಿಟ್ ಆಗಿ ತಂಡಕ್ಕೆ ಮರಳಲಿದ್ದಾರೆ. ಅಲ್ಲದೆ ಇಂಗ್ಲೆಂಡ್ ಪಿಚ್ ಗಳಲ್ಲಿ ವೇಗಿಗಳ ಅಗತ್ಯ ಹೆಚ್ಚಿರುವುದರಿಂದ ಭುವನೇಶ್ವರ್ ಕುಮಾರ್ ಮತ್ತು ಉಮೇಶ್ ಯಾದವ್ ಜತೆಗೆ ಮೂರನೇ ವೇಗಿಯ ಸ್ಥಾನಕ್ಕೆ ಹಿರಿಯ ನೆಹ್ರಾ ಮತ್ತು ಪ್ರತಿಭಾವಂತ ಮೊಹಮ್ಮದ್ ಶಮಿ ನಡುವೆ ಪೈಪೋಟಿ ಇರಲಿದೆ.

ಬ್ಯಾಟಿಂಗ್ ಕ್ರಮಾಂಕ ಹೆಚ್ಚು ಕಡಿಮೆ ಫಿಕ್ಸ್ ಆಗಿದೆ. ಕೆಎಲ್ ರಾಹುಲ್ ಗಾಯಗೊಂಡಿರುವುದರಿಂದ ಕೇವಲ ಆರಂಭಿಕ ಸ್ಥಾನಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲ ಉಳಿದಿದೆಯಷ್ಟೆ. ಇವರಲ್ಲಿ ಯಾರ ಮೇಲೆ ಆಯ್ಕೆ ಸಮಿತಿ ಮನಸ್ಸು ಮಾಡುತ್ತದೆ ಎಂದು ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ