ಮುಂಬೈ: ತುಳುನಾಡಿನ ಅಳಿಯ, ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಹರ್ನಿಯಾ ನೋವು ಕಾಣಿಸಿಕೊಂಡಿದೆ.
33 ವರ್ಷದ ಸ್ಟಾರ್ ಬ್ಯಾಟರ್ ಯಾದವ್ ಅವರು ಸ್ಪೋರ್ಟ್ಸ್ ಹರ್ನಿಯಾ (ಕಿಬೊಟ್ಟೆಯ ಸ್ನಾಯು ದುರ್ಬಲಗೊಳ್ಳುವುದು) ಸಂಬಂಧಿತ ನೋವಿನ ಚಿಕಿತ್ಸೆಗಾಗಿ ತಜ್ಞರನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ ಬಳಿಕ ಯಾದವ್ ಅವರು ಮುಂಬೈ ಟಿ20 ಲೀಗ್ ಆಡಿದ್ದಾರೆ. ಈ ಲೀಗ್ ಸಂದರ್ಭದಲ್ಲಿ ಸೂರ್ಯ ಅವರಲ್ಲಿ ನೋವು ಉಲ್ಬಣಿಸಿತ್ತೇ ಎಂಬುದು ತಿಳಿದು ಬಂದಿಲ್ಲ. ಕಳೆದ ಮೂರು ತಿಂಗಳಿಂದ ನೋವಿನ ಅರಿವಿಲ್ಲದೆ ಸಕ್ರಿಯ ಕ್ರಿಕೆಟ್ನಲ್ಲಿ ನಿರತರಾಗಿದ್ದರು.
2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಸೂರ್ಯಕುಮಾರ್ ಯಾದವ್, 700ಕ್ಕೂ ಹೆಚ್ಚು ರನ್ ಗಳಿಸುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದ್ದರು.
ಸೂರ್ಯಕುಮಾರ್ ಯಾದವ್ ಅಗತ್ಯವಿದ್ದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಆಗಸ್ಟ್-ಸೆಪ್ಟೆಂಬರ್ ಅವಧಿಗೂ ಮುನ್ನ ಟಿ20 ಕ್ರಿಕೆಟ್ ಇಲ್ಲದ ಕಾರಣ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ನಲ್ಲಿ ಸೂರ್ಯಕುಮಾರ್ ಗುಣಮುಖರಾಗಲು ಬೇಕಾದಷ್ಟು ಸಮಯ ಸಿಗಲಿದೆ ಎನ್ನಲಾಗಿದೆ.