ಅಂತರರಾಷ್ಟ್ರೀಯ ಕ್ರಿಕೆಟ್ ಎಂಬ ನಿರ್ದಯ ಜಗತ್ತಿನಲ್ಲಿ, ಹಲವಾರು ಯುವ ಆಟಗಾರರು ರಾಷ್ಟ್ರೀಯ ತಂಡದವರೆಗಿನ ತಮ್ಮ ಹಾದಿಯನ್ನು ಅರ್ಧಕ್ಕೆ ಮೊಟಕುಗೊಳಿಸಿಕೊಂಡು ನಿರಾಶರಾಗಿದ್ದಾರೆ. ಇಂದು ಜಗದ್ವಿಖ್ಯಾತರಾಗಿರುವ ವಿರಾಟ್ ಕೂಡ ಇಂಡಿಯನ್ ಪ್ರಿಮಿಯರ್ ಲೀಗ್ಗೆ ಪಾದಾರ್ಪಣೆ ಮಾಡಿದ ಬಳಿಕ ಇಂತಹದೇ ಸವಾಲಿನ ದಿನಗಳನ್ನು ಎದುರಿಸಿದ್ದರು. ಆ ಕಠಿಣ ಸಂದರ್ಭದಲ್ಲಿ ಅವರ ಕೋಚ್ ರಾಜ್ ಕುಮಾರ್ ಶರ್ಮಾ ಬಂಡೆಗಲ್ಲಿನಂತೆ ನಿಂತು ಬೆನ್ನಿಗಾಸರೆಯಾದರು. ಸೋಲಿನ ಸಂಕೋಲೆಯನ್ನು ಕಿತ್ತೊಸೆದು ವಿಶ್ವದ ಅಗ್ರ ಗಣ್ಯ ಬ್ಯಾಟ್ಸ್ಮನ್ ಆಗಲು ನೆರವಾದರು.
ಇದೆಲ್ಲವನ್ನು ವಿವರಿಸಿದ್ದು ಏಕೆಂದರೆ ಸ್ಪೋಟಕ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಬಹುದೊಡ್ಡ ಗುಣವೆಂದರೆ ತಾವು ಎಲ್ಲಿಂದ ಸಾಧನೆ ಪಯಣವನ್ನು ಪ್ರಾರಂಭಿಸಿದೆ ಎಂಬುದನ್ನು ಅವರೆಂದಿಗೂ ಮರೆಯಲಾರರು. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಕೊಹ್ಲಿ ತಮ್ಮ ಇಲ್ಲಿಯವರೆಗಿನ ದಾರಿಯನ್ನು ಒಮ್ಮೆ ಸಿಂಹಾವಲೋಕನ ಮಾಡಿದರು. ಅಂದು ಕೊಹ್ಲಿ ,ಶರ್ಮಾ ಅವರಿಗೆ ಹೃದಯ ಕಲಕುವ ಗೌರವವನ್ನು ಅರ್ಪಿಸಿ ಗಮನ ಸೆಳೆದರು.
ಮಾರ್ಮಿಕವಾದ ಅವರ ಟ್ವೀಟ್ ಹೀಗಿತ್ತು:
"ವಿಶ್ವದ ಅತ್ಯುತ್ತಮ ಗುರುವಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ಬದುಕಿನಲ್ಲಿ ಮುನ್ನಡೆಯುವಂತ ಪಾಠ ಕಲಿಸಿದ್ದಕ್ಕೆ ರಾಜ್ ಕುಮಾರ್ ಸರ್ ಅವರೇ ನಿಮಗೆ ಧನ್ಯವಾದಗಳು. ಜತೆಯಾಗಿ ನಾವಿಬ್ಬರು ಹಲವು ಏರಿಳಿತಗಳನ್ನು ಕಂಡಿದ್ದೇವೆ. ಆದರೆ ಈಗ ನಾವು ನಿಂತಿರುವ ಜಾಗ ಹಿಂದೆಂದಿಗಿಂತಲೂ ಬಹಳ ಗಟ್ಟಿಯಾಗಿದೆ. ನೀವಿಲ್ಲದೇ ಏನು ಕೂಡ ಸಾಧ್ಯವಿರಲಿಲ್ಲ. ನನ್ನ ಜೀವನದ ಅತ್ಯುತ್ತಮ ಸಹಭಾಗಿತ್ವ ನಿಮ್ಮ ಜತೆ ಕಂಡಿದ್ದೇನೆ. ಧನ್ಯವಾದಗಳು ಸರ್, ನೀವೊಂದು ಅದ್ಭುತ".