7 ವರ್ಷದ ಬಾಲಕನನ್ನು ಅಪಹರಿಸಿ ಟ್ರಾಕ್ಟರ್ ಬೇಡಿಕೆಯನ್ನಿಟ್ಟರು

ಗುರುವಾರ, 14 ಮೇ 2015 (16:01 IST)
ಶ್ರೀಮಂತರ ಮಕ್ಕಳನ್ನು ಅಪಹರಿಸಿ ಭಾರೀ ಮೊತ್ತದ ಹಣದ ಬೇಡಿಕೆ ಇಡುವುದನ್ನು ಕೇಳಿರುತ್ತೀರಾ? ಆದರೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ 7ರ ಹರೆಯದ ಬಾಲಕನೊಬ್ಬನನ್ನು ಅಪಹರಿಸಿದ ಅಪಹರಣಕಾರರು ಆತನ ಪೋಷಕರಲ್ಲಿ ಇಟ್ಟ ಬೇಡಿಕೆ ಏನೆಂದು ಕೇಳಿದರೆ ನೀವು ದಂಗಾಗಿ ಹೋಗುತ್ತೀರಿ. 

ಬಾಲಕನ ಸ್ವಗ್ರಾಮ ವೀರ್ಪುರ- ಗರೋಥಾದಿಂದ ಕಳೆದ ವಾರ ಬಾಲಕನನ್ನು ಕಿಡ್ನಾಪ್ ಮಾಡಿದ್ದ ಆರೋಪಿಗಳು ತಮಗೆ ಟ್ರಾಕ್ಟರ್ ನೀಡಿದರೆ ಮಾತ್ರ ಆತನನ್ನು ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ದರೆ ಆತನನ್ನು ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. 
 
ಬುಧವಾರ ಝಾನ್ಸಿಯ ಹಿರಿಯ ಪೊಲೀಸ್ ಅಧೀಕ್ಷಕರಾದ ಕಿರಣ್.ಎಸ್ ಅವರನ್ನು ಭೇಟಿಯಾದ ಮಗುವಿನ ತಾಯಿ ಸುಮನ್, ತನ್ನ ಮಗನ್ನು ರಕ್ಷಿಸುವಂತೆ  ಮನವಿ ಮಾಡಿಕೊಂಡಿದ್ದರು.  ಮೇ 6 ರಂದು ತನ್ನ ಮಗ ಪ್ರದೀಪ್ ಮನೆಯ ಹೊರಗಡೆ ಆಟವಾಡುತ್ತಿದ್ದಾಗ  ಮೋಟಾರ್ ಸೈಕಲ್ ಮೇಲೆ ಬಂದ ಇಬ್ಬರು ಆತನನ್ನು ಅಪಹರಿಸಿದ್ದರು ಎಂದು ತಿಳಿಸಿದ್ದ ಆಕೆ ಇದರ ಹಿಂದೆ ತಮ್ಮ ಸಂಬಂಧಿಕರ ಕೈವಾಡವಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಳು. 
 
ಅವರ ಬೇಡಿಕೆಯನ್ನು ಈಡೇರಿಸಿದರೆ ಮಾತ್ರ ಮಗುವನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗುವುದು ಎಂದು ಕಿಡ್ನಾಪ್ ಮಾಡಿದವರು ಫೋನ್ ಮೂಲಕ ಬೆದರಿಸಿದ್ದಾರೆ ಎಂದು ಆಕೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ. 
 
ಪೊಲೀಸ್ ಅಧೀಕ್ಷಕರು ನೀಡಿರುವ ಸೂಚನೆಯ ಮೇರೆಗೆ ಗರೋಥಾ ಠಾಣಾಧಿಕಾರಿ ಉದಯ್‌ಭಾನ್ ಗೌತಮ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಾಲಕನನ್ನು ಪತ್ತೆ ಹಚ್ಚಲು ಪ್ರಯತ್ನ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ