ಮೂಷಕ ವಾಹನ ಭೂಷಿತ ಗಣಪ

ವಿಘ್ನವಿನಾಶಕ ಗಣಪ ಮೂಷಕ ವಾಹನ ಭೂಷಿತ ರಾಗಿರುವುದಕ್ಕೆ ಪುರಾಣದಲ್ಲಿ ವಿವಿಧ ಕತೆಗಳಿವೆ.

WD
ಅಸುರ ಗುರು ಶುಕ್ರಚಾರ್ಯರ ಸಲಹೆಯಂತೆ ಶಿವನ ಕುರಿತು ಉಗ್ರ ತಪಗೈದ ರಾಕ್ಷಸ ಶಿವನನ್ನು ಒಲಿಸಿಕೊಂಡು ಅವರಿಂದ ಅದಮ್ಯ ಶಕ್ತಿಗಳನ್ನು ವರವಾಗಿ ಪಡೆದುಕೊಳ್ಳುತ್ತಾನೆ. ಆದರೆ ಆ ಶಕ್ತಿಯನ್ನು ದೇವತೆಗಳನ್ನು ಪೀಡಿಸಲು ದುರುಪಯೋಗಪಡಿಸಿಕೊಳ್ಳುತ್ತಾನೆ. ದೇವತೆಗಳು ಆದಿವಂದ್ಯರ ಬಳಿ ಸಹಾಯಕ್ಕಾಗಿ ಧಾವಿಸುತ್ತಾರೆ. ದೇವತೆಗಳ ಪ್ರಾರ್ಥನೆಯ ಮೇರೆಗೆ ದುಷ್ಟ ರಾಕ್ಷಸನೊಂದಿಗೆ ಗಜಕರ್ಣ ಯುದ್ಧಕ್ಕೆ ತೊಡಗಿದ. ಆದರೆ ವರಬಲ ಹೊಂದಿರುವ ದೈತ್ಯನನ್ನು ಸಾಮಾನ್ಯ ಯುದ್ಧದ ಮೂಲಕ ಸೋಲಿಸುವುದು ಸಾಧ್ಯವಿಲ್ಲ ಎಂದು ವಿದ್ಯಾಧಿದೇವನ ಅರಿವಿಗೆ ಬರುತ್ತದೆ. ಆಗ ತನ್ನ ದಂತವನ್ನು ಮುರಿದು ಅಸುರನ ಮೇಲೆ ಪ್ರಯೋಗಿಸಿ ರಕ್ಕಸನನ್ನು ಬಂಧಿಸಿ ಇಲಿಯಾಗಿ ಪರಿವರ್ತಿಸಿ ತನ್ನ ವಾಹನವಾಗಿಸಿಕೊಳ್ಳುತ್ತಾನೆ ಮತ್ತು ಈ ಮೂಲಕ ಮೂಷಕ ವಾಹನ ಭೂಷಿತರಾಗುತ್ತಾರೆ.

ಗೌರೀತನಯ ಮೂಷಕ ವಾಹನನಾದ ಬಗ್ಗೆ ಇರುವ ಇನ್ನೊಂದು ಕತೆಯಂತೆ, ಒಂದುದಿನ ಗಾಂಧರ್ವ ಕ್ರೌಂಚ ದೇವೆಂದ್ರರ ಸಭೆಯಲ್ಲಿ ವರುಣದೇವನನ್ನು ಅವಮಾನ ಪಡಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಕ್ರೌಂಚನನ್ನು ಇಲಿಯಾಗಿ ಪರಿವರ್ತಿಸಿ ವರುಣದೇವ ಸೇಡು ತೀರಿಸಿಕೊಳ್ಳುತ್ತಾರೆ. ಇಲಿಯಾಗಿ ಬದಲಾದ ಕ್ರೌಂಚ ಸಾಮಾನ್ಯ ಇಲಿಗಳಂತೆಯೇ ಪರಾಶರರ ಆಶ್ರಮಕ್ಕೆ ನುಗ್ಗಿ ದಾಂಧಲೆ ಎಬ್ಬಿಸಲು ಶುರುವಿಟ್ಟಿತು. ಋಷಿಗಳು ವಿಘ್ನನಾಶಕನನ್ನು ಪ್ರಾರ್ಥಿಸಿದರು, ಭಕ್ತನ ಮೊರೆ ಕೇಳಿ ಧಾವಿಸಿದ ಭಕ್ತವತ್ಸಲ ಇಲಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ತನ್ನ ವಾಹನವಾಗಿರಿಸಿಕೊಂಡ ಎಂಬುದು ಇನ್ನೊಂದು ಕತೆ.