ಐಪಿಎಲ್ನಲ್ಲಿ ಭಾರೀ ಹಣ ತೆತ್ತು ಖರೀದಿಸಿದ ಇಬ್ಬರು ಆಟಗಾರರಿಗೆ ಖರ್ಚು ಮಾಡಿದ ಹಣಕ್ಕೆ ಸಮರ್ಥನೆ ನೀಡುವಂತ ಆಟವಾಡುವಲ್ಲಿ ವಿಫಲರಾಗಿದ್ದಾರೆ. ಭಾರತದ 2011ನೇ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್ ಮತ್ತು ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಈ ಬಾರಿಯ ಹರಾಜಿನಲ್ಲಿ ದೊಡ್ಡ ಖರೀದಿಯಾಗಿದ್ದಾರೆ. ಆದರೆ ಇದುವರೆಗಿನ ಪಂದ್ಯಗಳಲ್ಲಿ ಇಬ್ಬರೂ ಯಶಸ್ಸು ಕಾಣದೇ ನೈಜ ಸಾಮರ್ಥ್ಯ ತೋರುವಲ್ಲಿ ವಿಫಲರಾಗಿದ್ದಾರೆ.
ಯುವರಾಜ್ ಸಿಂಗ್ ಅವರನ್ನು ಡೆಲ್ಲಿ ಡೇರ್ ಡೆವಿಲ್ಸ್ 16 ಕೋಟಿ ರೂ. ಕೊಟ್ಟು ಹರಾಜಿನಲ್ಲಿ ಖರೀದಿಸಿತ್ತು.ಆದರೆ ಐದು ಪಂದ್ಯಗಳಲ್ಲಿ 120 ರನ್ ಮಾತ್ರ ಬಾರಿಸಿರುವ ಯುವರಾಜ್ ಅತ್ಯಧಿಕ ಸ್ಕೋರ್ 54 ರನ್ಗಳಾಗಿತ್ತು. ಇದರಿಂದ ಅವರನ್ನು ಬ್ಯಾಟಿಂಗ್ ಪಟ್ಟಿಯಲ್ಲಿ 20 ನೇ ಸ್ಥಾನದಲ್ಲಿರಿಸಲಾಗಿದೆ. ಬೆಂಗಳೂರು ಕಾರ್ತಿಕ್ ಅವರನ್ನು ಖರೀದಿಸಿ ಇನ್ನಷ್ಟು ಹೆಚ್ಚು ನಿರಾಶೆಗೊಂಡಿದೆ. ಕಾರ್ತಿಕ್ 4 ಪಂದ್ಯಗಳಲ್ಲಿ ಕೇವಲ 43 ರನ್ ಗಳಿಸಿ ಬ್ಯಾಟಿಂಗ್ ಪಟ್ಟಿಯಲ್ಲಿ 50ನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್ನಲ್ಲಿ ಭಾರತದ ಇಬ್ಬರು ಮುಖ್ಯ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಬೌಲಿಂಗ್ ಕೂಡ ಚೆನ್ನೈ ಪರ ಎಂದಿನಂತಿರಲಿಲ್ಲ. ಅಶ್ವಿನ್ ಬೌಲಿಂಗ್ ಪಟ್ಟಿಯಲ್ಲಿ 36ನೇ ಸ್ಥಾನದಲ್ಲಿದ್ದು, 5 ಪಂದ್ಯಗಳಲ್ಲಿ 2 ವಿಕೆಟ್ ಕಬಳಿಸಿದ್ದಾರೆ. ಜಡೇಜಾ ಕೂಡ ಪಟ್ಟಿಯಲ್ಲಿ ಇನ್ನೂ ಮೂರು ಸ್ಥಾನ ಕೆಳಗಿದ್ದು ಅಷ್ಟೇ ಸಂಖ್ಯೆಯ ವಿಕೆಟ್ ಗಳಿಸಿದ್ದಾರೆ.
ಅಶ್ವಿನ್ಗೆ ಹೋಲಿಸಿದರೆ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಪರ 8 ವಿಕೆಟ್ ಗಳಿಸಿದ್ದು, ಬೌಲರುಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ಆಶಿಶ್ ನೆಹ್ರಾ ಟೀಂ ಇಂಡಿಯಾದ 2011ನೇ ವಿಶ್ವಕಪ್ ವಿಜೇತರ ಸಾಲಿನಲ್ಲಿದ್ದು, ಬೌಲರ್ಗಳ ಸಾಲಿನಲ್ಲಿ 10 ವಿಕೆಟ್ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.