ಆರ್‌ಸಿಬಿ ಸ್ಪಿನ್ನರ್ ಚಹಲ್ ಡಿ ವಿಲಿಯರ್ಸ್‌‍ಗೆ ಕ್ಷಮೆ ಕೇಳಿದ್ದು ಯಾಕೆ?

ಬುಧವಾರ, 25 ಮೇ 2016 (15:55 IST)
ನವದೆಹಲಿ: ಎಬಿ ಡಿ ವಿಲಿಯರ್ಸ್ ರಾಯಲ್ ಚಾಲೆಂಜರ್ಸ್ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿದ್ದರೆ, ಯಜುವೇಂದ್ರ ಚಾಹಲ್ ಐಪಿಎಲ್ 9 ರ ಅತ್ಯುತ್ತಮ ಸ್ಪಿನ್ನರ್. ಇಬ್ಬರೂ ಒಂದೇ ತಂಡಕ್ಕೆ ಆಡುತ್ತಾರಾದರೂ ಲೆಗ್ ಸ್ಪಿನ್ನರ್ ಚಹಲ್ ಡಿ ವಿಲಿಯರ್ಸ್‌ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಘಟನೆ ನಡೆದಿದೆ. 
 
 ದಕ್ಷಿಣ ಆಫ್ರಿಕಾದ ಸೂಪರ್ ಮ್ಯಾನ್ ಡಿ ವಿಲಿಯರ್ಸ್ ಅವರ ಮಂತ್ರಮುಗ್ಧಗೊಳಿಸುವ ಆಟದಿಂದ ಆರ್‌ಸಿಬಿಯನ್ನು ಐಪಿಎಲ್ ಫೈನಲ್‌ಗೆ ತಂದಿರಿಸಿದ ಕೆಲವೇ ಗಂಟೆಗಳಲ್ಲಿ ಚಹಲ್ ಟ್ವಿಟರ್‌ನಲ್ಲಿ ಐ ಯಾಮ್ ರಿಯಲಿ ಸಾರಿ ಬ್ರದರ್ ಎಂದು ಬರೆದಿದ್ದರು. 
 
ಗುಜರಾತ್ ವಿರುದ್ಧ ರೋಚಕ ಜಯದಿಂದ ಪುಳಕಿತರಾಗಿದ್ದ ಆರ್‌ಸಿಬಿ ಆಟಗಾರರ ಜತೆ ಚಹಲ್ ಕೂಡ ಮೈದಾನಕ್ಕೆ ಓಡಿ ಡಿ ವಿಲಿಯರ್ಸ್ ಮೈಮೇಲೆ ಹಾರಿದ್ದರು. ಆದರೆ ಅದರ ರಭಸಕ್ಕೆ ಡಿ ವಿಲಿಯರ್ಸ್ ಹೆಲ್ಮೆಟ್ ಎಗರಿಹೋಗಿತ್ತು. ಡಿ ವಿಲಿಯರ್ಸ್ ಕೆಲವು ಕ್ಷಣ ಹಿಂದಕ್ಕೆ ವಾಲಿ ಕೆಳಕ್ಕೆ ಬೀಳುವ ಹಾಗಾಗಿತ್ತು.  ಪಂದ್ಯ ನಂತರ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಡಿವಿಲಿಯರ್ಸ್ ಗಲ್ಲದ ಮೇಲೆ ಗಾಯದ ಗುರುತು ಎದ್ದುಕಾಣುತ್ತಿತ್ತು.  ಚಹಲ್ ಅವರ ಮೈಮೇಲೆ ಹಾರಿದ ರಭಸಕ್ಕೆ ಡಿ ವಿಲಿಯರ್ಸ್ ಗಲ್ಲಕ್ಕೆ ಗಾಯವಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ