ಪತ್ನಿ ಸೀಮಂತಕ್ಕೆ ಮೊದಲು ದರ್ಶನ್ ಆಶೀರ್ವಾದ ಪಡೆಯಲು ಬಂದ ಅಭಿಷೇಕ್ ಅಂಬರೀಶ್

Krishnaveni K

ಬುಧವಾರ, 14 ಆಗಸ್ಟ್ 2024 (12:31 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ರನ್ನು ಭೇಟಿಯಾಗಲು ಸುಮಲತಾ ಅಂಬರೀಶ್ ಆಗಲೀ, ಪುತ್ರ ಅಭಿಷೇಕ್ ಆಗಲೀ ಇದುವರೆಗೆ ಬಂದಿಲ್ಲ ಎಂಬ ಅಪವಾದವಿತ್ತು. ಆದರೆ ಈಗ ಕೊನೆಗೂ ಅಭಿಷೇಕ್ ಪರಪ್ಪನ ಅಗ್ರಹಾರಕ್ಕೆ ಬಂದಿದ್ದಾರೆ.

ಇಂದು ನಟ ಧನ್ವೀರ್ ಗೌಡ, ಚಿಕ್ಕಣ್ಣ ಜೊತೆ ಅಭಿಷೇಕ್ ಅಂಬರೀಶ್ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದು ನಟ ದರ್ಶನ್ ರನ್ನು ಭೇಟಿ ಮಾಡಿದ್ದಾರೆ. ದರ್ಶನ್ ನ್ಯಾಯಾಂಗ ಬಂಧನಕ್ಕೊಳಗಾಗಿ ಹೆಚ್ಚು ಕಡಿಮೆ ಎರಡು ತಿಂಗಳಾಗುತ್ತಾ ಬಂದಿದೆ. ಆದರೆ ಅವರನ್ನು ದೊಡ್ಮಗ ಎಂದೇ ಕರೆಯುತ್ತಿದ್ದ ಸುಮಲತಾ ಆಗಲೀ, ಅಣ್ಣ ಎನ್ನುತ್ತಿದ್ದ ಅಭಿಷೇಕ್ ಆಗಲೀ ಭೇಟಿಯಾಗಿಲ್ಲ ಎಂದು ಟೀಕೆಗಳು ಕೇಳಿಬಂದಿದ್ದವು.

ಆದರೆ ಈಗ ಅಭಿಷೇಕ್ ಅಂಬರೀಶ್ ಪತ್ನಿ ಅವಿವಾ ಗರ್ಭಿಣಿ ಎನ್ನುವ ಸುದ್ದಿಯಿದ್ದು, ಇದೇ ವಾರಂತ್ಯಕ್ಕೆ ಸೀಮಂತ ಶಾಸ್ತ್ರ ನೆರವೇರಲಿದೆ ಎನ್ನಲಾಗಿದೆ. ಪತ್ನಿಯ ಸೀಮಂತ ಶಾಸ್ತ್ರಕ್ಕೆ ಮುನ್ನ ಅಭಿ ಈಗ ಜೈಲಿನಲ್ಲಿರುವ ಅಣ್ಣನ ಆಶೀರ್ವಾದ ಪಡೆಯಲು ಜೈಲಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ನಟ ಧನ್ವೀರ್ ಈಗಾಗಲೇ ಎರಡು ಬಾರಿ ದರ್ಶನ್ ರನ್ನು ಜೈಲಿಗೆ ಬಂದು ಭೇಟಿ ನೀಡಿದ್ದರು. ಚಿಕ್ಕಣ್ಣ ಕೂಡಾ ಇದುವರೆಗೆ ಜೈಲಿಗೆ ಭೇಟಿ ನೀಡಿರಲಿಲ್ಲ. ಈಗ ಅಭಿಷೇಕ್ ಗೆ  ಈ ಇಬ್ಬರೂ ಸಾಥ್ ನೀಡಿದ್ದಾರೆ. ಮೊನ್ನೆಯಷ್ಟೇ ದರ್ಶನ್ ರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿ ಹೋಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ