ವಿಕಲಾಂಗ ಅಭಿಮಾನಿಯ ತಳ್ಳಿದ ಬಾಡಿ ಗಾರ್ಡ್: ಕ್ಷಮೆ ಕೇಳಿದ ನಟ ನಾಗಾರ್ಜುನ

Krishnaveni K

ಸೋಮವಾರ, 24 ಜೂನ್ 2024 (10:38 IST)
ಹೈದರಾಬಾದ್: ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಓಡಾಡುವಾಗ ಅಭಿಮಾನಿಗಳು ಅವರ ಬಳಿ ಬರಲು ಪ್ರಯತ್ನಿಸುವುದು ಸಹಜ. ಆದರೆ ಇದೇ ರೀತಿ ಮಾಡಲು ಹೋದ ವಿಕಲಾಂಗ ಅಭಿಮಾನಿಯೊಬ್ಬರನ್ನು ನಟ ನಾಗಾರ್ಜುನ ಬಾಡಿ ಗಾರ್ಡ್ ತಳ್ಳಿದ ಪರಿಣಾಮ ಆತ ನೆಲಕ್ಕೆ ಬಿದ್ದಿದ್ದಾನೆ. ಘಟನೆ ಬಗ್ಗೆ ನಾಗಾರ್ಜುನ ಈಗ ಕ್ಷಮೆ ಯಾಚಿಸಿದ್ದಾರೆ.

ನಟ ನಾಗಾರ್ಜುನ ಏರ್ ಪೋರ್ಟ್ ನಿಂದ ಹೊರಬರುತ್ತಿದ್ದರು. ಈ ವೇಳೆ ನಟ ಧನುಷ್ ಕೂಡಾ ಪುತ್ರನ ಜೊತೆಗೆ ಅವರ ಹಿಂದೆಯೇ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಅಲ್ಲೇ ಇರುವ ಕೆಫೆಯಲ್ಲಿಕೆಲಸ ಮಾಡುವ ವಿಕಲಾಂಗ ಅಭಿಮಾನಿಯೊಬ್ಬರು ನಾಗಾರ್ಜುನ ಅವರನ್ನು ಸ್ಪರ್ಶಿಸಲು ಬರುತ್ತಾನೆ. ಇದನ್ನು ಗಮನಿಸದೇ ನಾಗಾರ್ಜುನ ಮುಂದೆ ನಡೆಯುತ್ತಾರೆ.

ಆದರೆ ಅವರ ಜೊತೆಗೇ ಇದ್ದ ಬಾಡಿ ಗಾರ್ಡ್ ವಿಕಲಾಂಗ ಅಭಿಮಾನಿಯನ್ನು ಪಕ್ಕಕ್ಕೆ ಸರಿಸಲು ತಳ್ಳುತ್ತಾರೆ. ಈ ವೇಳೆ ಅಭಿಮಾನಿ ಆಯತಪ್ಪಿ ಕೆಳಕ್ಕೆ ಬೀಳುತ್ತಾರೆ. ಇದು ನಾಗಾರ್ಜುನ ಗಮನಕ್ಕೆ ಬರುವುದೇ ಇಲ್ಲ. ಅವರ ಹಿಂದಿದ್ದ ನಟ ಧನುಷ್ ನೋಡಿದರೂ ಏನೂ ಪ್ರತಿಕ್ರಿಯಿಸದೇ ಮುಂದೆ ಸಾಗುತ್ತಾರೆ. ಈ ವಿಡಿಯೋವನ್ನು ಪಪ್ಪರಾಜಿಯೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್ ಪುಟದಲ್ಲಿ ಪ್ರಕಟಿಸಿ ಮಾನವೀಯತೆ ಎಲ್ಲಿ ಹೋಯಿತು ಎಂದು ಕೇಳುತ್ತಾರೆ.

ಇದು ನಾಗಾರ್ಜುನ ಗಮನಕ್ಕೆ ಬಂದಿದ್ದು, ವಿಡಿಯೋಗೆ ಕಾಮೆಂಟ್ ಮಾಡಿರುವ ಅವರು ಘಟನೆ ಬಗ್ಗೆ ಕ್ಷಮೆ ಯಾಚಿಸಿದ್ದಾರೆ. ‘ಇದು ಈಗಷ್ಟೇ ನನ್ನ ಗಮನಕ್ಕೆ ಬಂತು. ಇದು ನಡೆಯಬಾರದಿತ್ತು. ಆ ವ್ಯಕ್ತಿಗೆ ನಾನು ಕ್ಷಮೆ ಯಾಚಿಸುತ್ತೇನೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುತ್ತೇವೆ’ ಎಂದು ನಾಗಾರ್ಜುನ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ