ಸೋಷಿಯಲ್ ಮೀಡಿಯಾದಲ್ಲಿ ಬಂದು ಕಣ್ಣೀರು ಹಾಕಿದ ಆಂಕರ್ ಅನುಶ್ರೀ ಹೇಳಿದ್ದೇನು?

ಶುಕ್ರವಾರ, 2 ಅಕ್ಟೋಬರ್ 2020 (10:20 IST)
ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಪಟ್ಟಂತೆ ತಮ್ಮ ಹೆಸರು ಮಾಧ್ಯಮಗಳಲ್ಲಿ ಓಡಾಡುತ್ತಿರುವ ರೀತಿಯಿಂದ ಬೇಸರಗೊಂಡಿರುವ ಆಂಕರ್ ಅನುಶ್ರೀ ಇನ್ ಸ್ಟಾಗ್ರಾಂ ಪುಟದಲ್ಲಿ ವಿಡಿಯೋ ಸಂದೇಶ ಮೂಲಕ ಕಣ್ಣೀರು ಹಾಕುತ್ತಾ ದಯವಿಟ್ಟು ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ. ಅಷ್ಟಕ್ಕೂ ಅನುಶ್ರೀ ಏನು ಹೇಳಿದ್ದಾರೆ ಇಲ್ಲಿ ನೋಡಿ.


‘ಸೆಪ್ಟೆಂಬರ್ 24. ನನ್ನ ಜೀವನದ ಯಾವ ಘಟ್ಟದಲ್ಲೂ ನಾನು ನೆನೆಸಿಕೊಳ್ಳಲು ಇಷ್ಟಪಡದೇ ಇರುವ ದಿನ. 12 ವರ್ಷಗಳ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋ ವಿನ್ ಆದಾಗ ಮತ್ತೆ ಇದೇ ದಿನ ನನಗೆ ಮುಂದೊಂದು ದಿನ ಮುಳ್ಳಾಗಿ ಬರುತ್ತೆ ಅಂತ. ಈ ವಿಡಿಯೋವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಮಾಡ್ತಿಲ್ಲ. ಆದರೆ ಎಲ್ಲರೂ ತಮ್ಮ ಅಭಿಪ್ರಾಯ ಹೇಳ್ತಿದ್ದಾರೆ. ಆದರೆ ಆ ಅಭಿಪ್ರಾಯಗಳು ನನ್ನ ಬಗ್ಗೆಯೇ ಆಗಿರುವುದರಿಂದ ಈ ವಿಡಿಯೋ ಮಾಡ್ತಿದ್ದೇನೆ.

ಸಿಸಿಬಿ ನೋಟಿಸ್ ಬಂದಿದ್ದು ನನಗೆ ನೋವು ತಂದಿಲ್ಲ. ಆದರೆ ಸಿಸಿಬಿ ಕಚೇರಿಗೆ ಹೋಗಿ ಬಂದ ಮೇಲೆ ನನ್ನನ್ನು ಬಿಂಬಿಸಿದ ರೀತಿ ನೋವು ತಂದಿದೆ. ನೋವು ಎಂದರೆ ಅದು ಸಣ್ಣ ಪದವಾಗುತ್ತದೆ. ನನ್ನ ಕುಟುಂಬದವರಿಗೆ ಕಳೆದ ಒಂದು ವಾರದಿಂದ ನೆಮ್ಮದಿಯೇ ಇಲ್ಲದಾಗಿದೆ. ಇದೆಲ್ಲದರ ಹೊರತಾಗಿಯೂ ಅನುಶ್ರೀ ಯಾರು ಏನೇ ಹೇಳಿದ್ರೂ ನಿಮ್ಮ ಮೇಲೆ ನಮಗೆ ನಂಬಿಕೆಯಿದೆ ಎಂದು ನನಗೆ ಬೆಂಬಲವಾಗಿ ನಿಂತ ಎಲ್ಲಾ ಅಭಿಮಾನಿಗಳಿಗೆ ನನ್ನ ತುಂಬು ಹೃದಯದ ದೊಡ್ಡ ನಮಸ್ಕಾರಗಳು. ಯಾವತ್ತೂ ಇದನ್ನು ಮರೆಯಲ್ಲ. ಥ್ಯಾಂಕ್ಯೂ... ಇದನ್ನು ಮೀರಿ ಸುತ್ತಮುತ್ತ ಅಭಿಪ್ರಾಯಗಳು, ಅಂತೆಕಂತೆಗಳು ಹರಿದಾಡುತ್ತಿದೆ. ಇದು ನಮ್ಮ ನೆಮ್ಮದಿಯನ್ನು ಹಾಳುಮಾಡುತ್ತಿದೆ. ಪ್ಲೀಸ್ ಈ ರೀತಿಯ ವಿಚಾರಗಳನ್ನು ಹರಡುವ ಮೊದಲು ನಮ್ಮ ಮನಸ್ಥಿತಿ ಬಗ್ಗೆ ಯೋಚನೆ ಮಾಡಿ. ಇಷ್ಟೇ ನಾನು ಕೇಳಿಕೊಳ್ಳೋದು. ಮತ್ತೊಮ್ಮೆ ಈ ಕಷ್ಟದ ದಿನಗಳಲ್ಲಿ ನನ್ನ ಜತೆಗೆ ನಿಂತ ಟೀಂ, ಜೀ ವಾಹಿನಿ, ಕುಟುಂಬದವರು, ಅಭಿಮಾನಿಗಳು ಎಲ್ಲರಿಗೂ ಧನ್ಯವಾದಗಳು. ಕಡೆಯದಾಗಿ ಒಂದು ವಿಚಾರ ಹೇಳೋದು ಇಷ್ಟಪಡ್ತೀನಿ. ಈ ಹೆಸರು ಕನ್ನಡಿಗರು ನನಗೆ ಕೊಟ್ಟಿದ್ದು, ಈ ಹೆಸರಿಗೆ ಕಳಂಕ ತರುವ ಯಾವುದೇ ಕೆಲಸವನ್ನೂ ನಾನು ಮಾಡಿಲ್ಲ, ಮಾಡೋದು ಇಲ್ಲ. ಧನ್ಯವಾದಗಳು’ ಎಂದು ಕಣ್ಣೀರು ಹಾಕುತ್ತಾ ಕೈ ಮುಗಿದು ಕೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ