ಜೈಲು ಸೇರಿದ ದಾಸ, ಬಿಗ್‌ಬಾಸ್ ಖ್ಯಾತಿಯ ವಿನಯ್‌ಗೆ ಹೊಸ ತಲೆಬಿಸಿ

Sampriya

ಮಂಗಳವಾರ, 25 ಜೂನ್ 2024 (18:47 IST)
photo Courtesy Instagram
ಬೆಂಗಳೂರು: ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿಯಾಗಿ ಬಂಧನವಾಗುತ್ತಿದ್ದ ಹಾಗೇ ಬಿಗ್‌ಬಾಸ್‌ ಖ್ಯಾತಿಯ ವಿನಯ್ ಗೌಡ ಅವರಿಗೆ ದೊಡ್ಡ ಚಿಂತೆ ಶುರುವಾಗಿದೆ.

ದರ್ಶನ್ ಬಂಧನ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿದ ವಿನಯ್ ಗೌಡ ಅವರು, ನಾನು ಬಿಗ್‌ಬಾಸ್‌ನಿಂದ ಬಂದ್ಮೇಲೆ ಸಿಕ್ಕಾ ಮೊದಲ ಪ್ರಾಜೆಕ್ಟ್ ಡೆವಿಲ್ ಆಗಿತ್ತು. ನನ್ನ ನಟನೆಯನ್ನು ಗುರುತಿಸಿ ಮಿಲನ ಪ್ರಕಾಶ್ ಅವರು ನನಗೆ ಈ ದೊಡ್ಡ ಅವಕಾಶವನ್ನು ನೀಡಿದ್ದರು.

ನನ್ನನ್ನು  ಮಾತಿಗೆ ಕರೆದ ಮಿಲನ ಪ್ರಕಾಶ್ ಅವರು, ಒಳ್ಳೆಯ ಸ್ಟಾರ್ ನಟನ ಜತೆ ನಿಮಗೆ ವಿಲನ್ ಪಾತ್ರ ಇದೆ ಎಂದು ಹೇಳಿದರು.   ಆ ಮೇಲೆ ನನಗೆ ಅದು 'ಡೆವಿಲ್' ಸಿನಿಮಾ ಎಂದು ತಿಳಿಯಿತು. ಈಗಾಗಲೇ ನನ್ನ ಭಾಗದ 30% ಶೂಟಿಂಗ್ ಮುಗಿದಿದ್ದು, ದರ್ಶನ್ ಅವರೊಂದಿಗಿನ ಕೆಲ ಡೈಲಾಗ್ ಅಷ್ಟೇ ಬಾಕಿ ಉಳಿದಿತ್ತು ಎಂದರು.

ಡೆವಿಲ್ ಸಿನಿಮಾ ನನ್ನ ವೃತ್ತಿ ಬದುಕಿಗೆ ದೊಡ್ಡ ಸಿನಿಮಾ ಆಗಿದೆ.  ಈ ಪ್ರಾಜೆಕ್ಟ್ ಬಗ್ಗೆ ನೆಗೆಟಿವ್ ಆಗಿ ಯೋಚನೆ ಮಾಡೋದಿಲ್ಲ. ಆದರೆ ಕೈತಪ್ಪಿದರೆ ನಿಜಕ್ಕೂ ಬೇಸರ ಆಗುತ್ತೆ, ಅದರಲ್ಲಿ ಸಂದೇಹ ಇಲ್ಲ ಎಂದು ವಿನಯ್ ಕಳವಳ ವ್ಯಕ್ತಪಡಿಸಿದರು.

ಕಾನೂನು ಪ್ರಕಾರ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದೆ.  ಹೀಗಾಗಿ ನಾನು ದರ್ಶನ್ ಅವರ ಬಗ್ಗೆ ಮಾತಾಡೋದು ಸರಿ ಇಲ್ಲ. ಎಲ್ಲವೂ ಖುಷಿ ಖುಷಿಯಾಗಿ ಮುಗಿಯಲಿ ಅಂತ ಆಶಿಸುತ್ತೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ