ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟರಾಗಿದ್ದ ಸುಧೀರ್ ಅವರ ಪುತ್ರ, ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ನಟ ಶಬರೀಶ್ ಎಂಬವರಿಂದ 20 ಲಕ್ಷ ರೂ. ಹಣ ಪಡೆದು ವಾಪಸ್ ಮಾಡುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಶಬರೀಶ್ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ತಮ್ಮಿಂದ 22 ಲಕ್ಷ ರೂಪಾಯಿ ಹಣವನ್ನು ನಂದಕಿಶೋರ್ ಪಡೆದಿದ್ದರು. ಆದರೆ ಈಗ ವಾಪಸ್ ಮಾಡ್ತಿಲ್ಲ. ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೆ ಈ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿ ಅವರು ಹೇಳಿದ್ದಾರೆ. ಶಬರೀಶ್ ಶೆಟ್ಟಿ ಕಿಚ್ಚ ಸುದೀಪ್ ಅವರ ಅಭಿಮಾನಿ ಕೂಡಾ. ಒಂಭತ್ತು ವರ್ಷಗಳ ಹಿಂದೆಯೇ ನಂದಕಿಶೋರ್ ಪರಿಚಯವಾಗಿತ್ತು. ಸಿಸಿಎಲ್ ನಲ್ಲಿ ಆಡಿಸುವುದಾಗಿ ಭರವಸೆ ನೀಡಿ 22 ಲಕ್ಷ ರೂ. ಹಣ ಪಡೆದಿದ್ದರು. ಇದಕ್ಕಾಗಿ ಚಿನ್ನ ಅಡವಿಟ್ಟು ಹಣ ತಂದಿದ್ದೆ.
ಆದರೆ ಈವರೆಗೆ ಹಣ ಮರಳಿಸಿಲ್ಲ. ಕೇಳಿದಾಗಲೆಲ್ಲಾ ಸುದೀಪ್ ಸರ್ ಹೆಸರು ಹೇಳಿ ಯಾಮಾರಿಸುತ್ತಿದ್ದರು. ಇದುವರೆಗೆ ಹಣವನ್ನೂ ಕೊಟ್ಟಿಲ್ಲ, ಸಿನಿಮಾದಲ್ಲಿ ಅವಕಾಶವನ್ನೂ ಕೊಡಲಿಲ್ಲ. ಕೆಸಿಸಿ ಟೂರ್ನಿಯಲ್ಲಿ ಎರಡು ಸೀಸನ್ ಆಡಿದ್ದೇನೆ. ಈಗ ಹಣ ಕೇಳಿದರೆ ಕೆಸಿಸಿಯಿಂದ ಹೊರ ಹಾಕುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಅವರು ಇನ್ನೂ ದೂರು ದಾಖಲಿಸಿಲ್ಲ.