ಪ್ರತಿಷ್ಠಿತ ನಂದಿ ಅವಾರ್ಡ್ಸ್: ಭಾರತಿ ವಿಷ್ಣುವರ್ದನ್, ಶ್ರೀನಾಥ್ ಗೆ ಜೀವಮಾನ ಸಾಧನೆ ಪ್ರಶಸ್ತಿ

ಗುರುವಾರ, 7 ಡಿಸೆಂಬರ್ 2023 (16:06 IST)
WD
ಬೆಂಗಳೂರು: ಕನ್ನಡದಲ್ಲಿ ಇದೇ ಮೊದಲ ಬಾರಿಗೆ ನಡೆದ ನಂದಿ ಅವಾರ್ಡ್ಸ್ ಸಮಾರಂಭದಲ್ಲಿ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಹಿರಿಯ ನಟಿ ಡಾ. ಭಾರತಿ ವಿಷ್ಣುವರ್ಧನ್, ಶ್ರೀನಾಥ್ ಸೇರಿದಂತೆ ಹಲವು ತಾರೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತೆಲುಗಿನಲ್ಲಿ ನಂದಿ ಅವಾರ್ಡ್ಸ್ ಕಾರ್ಯಕ್ರಮ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಈ ಹೆಸರಿನಲ್ಲಿ ಅವಾರ್ಡ್ಸ್ ಕಾರ್ಯಕ್ರಮ ನಡೆದಿದೆ.

ಕನ್ನಡದ ನಂದಿ ಪ್ರಶಸ್ತಿ ಸಮಾರಂಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ಧ್ರುವ ಸರ್ಜಾ, ರಿಷಬ್ ಶೆಟ್ಟಿ, ಉಮಾಶ್ರೀ ಸೇರಿದಂತೆ ಅನೇಕ ಖ್ಯಾತ ಕಲಾವಿದರು ಭಾಗಿಯಾಗಿದ್ದಾರೆ. ಜೀವಮಾನ ಶ್ರೇಷ್ಠ ಸಾಧನೆ, ಉತ್ತಮ ನಟ-ನಟಿ, ಪೋಷಕ ನಟ-ನಟಿ, ನಿರ್ದೇಶಕ ಸೇರಿದಂತೆ ಹಲವು ವಿಭಾಗಗಳಲ್ಲಿ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಜೀವಮಾನ ಶ್ರೇಷ್ಠ ಸಾಧನೆಗಾಗಿ ಹಿರಿಯ ನಟ ಶ್ರೀನಾಥ್ ಮತ್ತು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ರಿಗೆ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀನಾಥ್ ಭಾವುಕರಾದರು. ಭಾರತಿ ವಿಷ್ಣುವರ್ಧನ್ ಪರವಾಗಿ ಅವರ ಅಳಿಯ, ನಟ ಅನಿರುದ್ಧ್ ಜತ್ಕಾರ್ ಪ್ರಶಸ್ತಿ ಸ್ವೀಕರಿಸಿದರು.

ನವಂಬರ್ 19 ರಂದು ಕಿಚ್ಚ ಸುದೀಪ್ ನಂದಿ ಅವಾರ್ಡ್ಸ್ ಸಮಾರಂಭಕ್ಕೆ ಚಾಲನೆ ನೀಡಿದ್ದರು. ಮುಂದಿನ ದಿನಗಳಲ್ಲಿ ಕನ್ನಡ ಮಾತ್ರವಲ್ಲದೇ, ತುಳು, ಕೊಂಕಣಿ ಭಾಷೆಯ ಸಿನಿಮಾಗಳನ್ನೂ ಪ್ರಶಸ್ತಿ ಪಟ್ಟಿಯಲ್ಲೊಳಪಡಿಸುವುದಾಗಿ ಭಾ ಮಾ ಹರೀಶ್ ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ