ಕನ್ನಡ ಚಿತ್ರ ಗೆಲ್ಲುತ್ತಿಲ್ಲ ಎಂದವರಿಗೆ ಮುಖಕ್ಕೆ ಹೊಡೆದಂತೆ ಮಾಡಿದ ಗೋಲ್ಡನ್ ಸ್ಟಾರ್ ಕೃಷ್ಣಂ ಪ್ರಿಯ ಸಖಿ

Krishnaveni K

ಶುಕ್ರವಾರ, 16 ಆಗಸ್ಟ್ 2024 (08:52 IST)
ಬೆಂಗಳೂರು: ಇತ್ತೀಚೆಗೆ ಕನ್ನಡ ಸಿನಿಮಾಗಳು ಗೆಲ್ಲುತ್ತಿಲ್ಲ. ನಿರ್ಮಾಪಕರು, ಚಿತ್ರಮಂದಿರದ ಮಾಲಿಕರು ದಿವಾಳಿಯಾಗಿದ್ದಾರೆ ಎಂದು ಕಲಾವಿದರ ಸಂಘದಲ್ಲಿ ಪೂಜೆ ಮಾಡಲಾಗಿತ್ತು. ಆದರೆ ಸಿನಿಮಾ ಗೆಲ್ಲುತ್ತಿಲ್ಲ ಎಂದವರಿಗೆ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿರುವ ಕೃಷ್ಣಂ ಪ್ರಿಯ ಸಖಿ ಸೆಡ್ಡು ಹೊಡೆದಿದೆ.

ಇದಕ್ಕೆ ಮೊದಲು ಕಳೆದ ವಾರ ಬಿಡುಗಡೆಯಾಗಿದ್ದ ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿದ್ದ ಭೀಮ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿತ್ತು. ಆ ಮೂಲಕ ಕನ್ನಡ ಸಿನಿಮಾ ನೋಡಲು ಥಿಯೇಟರ್ ಗೆ ಬರುತ್ತಿಲ್ಲ ಎನ್ನುವವರ ಮುಂದೆ ಗೆದ್ದು ತೋರಿಸಿತ್ತು. ಇದೀಗ ಕೃಷ್ಣಂ ಪ್ರಿಯ ಸಖಿ ಸರದಿ.

ಗಣೇಶ್ ಸಿನಿಮಾಗಳೆಂದರೆ ಫ್ಯಾಮಿಲಿ ಓರಿಯೆಂಟೆಡ್ ಕತೆಯಿರುತ್ತದೆ. ಕೃಷ್ಣಂ ಪ್ರಿಯ ಸಖಿ ಕೂಡಾ ಪಕ್ಕಾ ಗಣೇಶ್ ಶೈಲಿಯ ಸಿನಿಮಾ. ಈ ಸಿನಿಮಾದ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದವು. ಇದೀಗ ಸಿನಿಮಾ ಕೂಡಾ ನಿನ್ನೆ ಬಿಡುಗಡೆಯಾಗಿ ಮೊದಲ ದಿನವೇ ಭರ್ಜರಿ ಓಪನಿಂಗ್ ಪಡೆದಿದೆ.

ಒಳ್ಳೆಯ ಸಿನಿಮಾಗಳನ್ನೇ ಕೊಡದೇ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ ಎಂದು ಅತ್ತು ಕರೆದು ಮಾಡಿ ಏನು ಪ್ರಯೋಜನ? ಈಗ ಎರಡು ಸ್ಟಾರ್ ಸಿನಿಮಾಗಳು ಚಿತ್ರಮಂದಿರಕ್ಕೆ ಬಂದ ಬೆನ್ನಲ್ಲೇ ಜನ ಕೂಡಾ ಥಿಯೇಟರ್ ಗೆ ಬಂದು ಸಿನಿಮಾ ನೋಡಿದ್ದಾರೆ. ಅದರಲ್ಲೂ ಈ ವಾರಂತ್ಯದಲ್ಲಿ ಎರಡು ಮೂರು ದಿನ ರಜೆಯಿದ್ದು ಸಾಕಷ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವ ನಿರೀಕ್ಷೆಯಿದೆ. ಈ ಎರಡು ಸಿನಿಮಾಗಳ ಯಶಸ್ಸು ಈಗ ಕನ್ನಡ ನಿರ್ಮಾಪಕರ ಆತ್ಮವಿಶ್ವಾಸ ಹೆಚ್ಚಿಸಿರುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ