ಐಟಿ ರೈಡ್ ಮುಗಿದ ಬಳಿಕ ಶಿವಣ್ಣ, ಪುನೀತ್, ಸುದೀಪ್ ಮಾಡಿದ್ದೇನು?

ಶನಿವಾರ, 5 ಜನವರಿ 2019 (11:16 IST)
ಬೆಂಗಳೂರು: ಮೊನ್ನೆಯಿಂದ ಐಟಿ ಅಧಿಕಾರಿಗಳ ದಾಳಿಗೆ ಒಳಗಾಗಿ ಬಳಲಿರುವ ತಾರೆಯರು ಇಂದು ಮುಕ್ತವಾಗಿ ಮನೆಯಿಂದ ಹೊರಗೆ ಬಂದಿದ್ದಾರೆ.


ಶಿವರಾಜ್ ಕುಮಾರ್,  ಪುನೀತ್ ರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಮನೆಯಲ್ಲಿ ಐಟಿ ದಾಳಿ ಮುಕ್ತಾಯಗೊಂಡಿದ್ದು, ಮಾಧ್ಯಮಗಳು, ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡುವಾಗ ಪುನೀತ್ ರಾಜ್ ಕುಮಾರ್ ಕೊಂಚ ಗರಂ ಆಗಿಯೇ ಇದ್ದಂತೆ ಕಾಣುತ್ತಿತ್ತು. ತಮ್ಮನ್ನು ಮಾತನಾಡಿಸಲು ಬಂದ ಅಭಿಮಾನಿಗಳ ಕೈ ಕುಲುಕಿ ಪುನೀತ್ ನೇರವಾಗಿ ಪತ್ನಿ ಜತೆ ನಟಸಾರ್ವಭೌಮ ಚಿತ್ರದ ಅಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ತೆರಳಿದರು. ಆದರೆ ಐಟಿ ದಾಳಿ ಬಗ್ಗೆ ವಿವರಣೆ ಕೇಳಿದಾಗ ಕೊಂಚ ಗರಂ ಆದ ಪುನೀತ್ ಇದನ್ನೆಲ್ಲಾ ನಿಮಗ್ಯಾಕೆ ಹೇಳಲಿ? ಇದು ನಾವು ಮತ್ತು ಐಟಿ ಅಧಿಕಾರಿಗಳ ನಡುವೆ ನಡೆದ ವಿಚಾರ. ಅವರ ಕರ್ತವ್ಯ ಅವರು ಮಾಡಿದ್ದಾರಷ್ಟೇ ಎಂದು ಉತ್ತರಿಸಿದ್ದಾರೆ.

ಇತ್ತ ಶಿವರಾಜ್ ಕುಮಾರ್ ಕೂಡಾ ಐಟಿ ದಾಳಿ ಮುಗಿದ ಖುಷಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ್ದು, ಕೊಂಚ ಕಿರಿ ಕಿರಿ ಆಗಿದ್ದು ನಿಜ. ಆದರೆ ಅವರು ಅವರ ಕರ್ತವ್ಯ ಮಾಡಿದ್ದಾರಷ್ಟೇ. ನಾವೂ ಸಂಪೂರ್ಣ ಸಹಕಾರ ನೀಡಿದ್ದೇವೆ ಎಂದಿದ್ದಾರೆ.

ಇನ್ನು, ಕಿಚ್ಚ ಸುದೀಪ್ ಕಳೆದ ಎರಡು ದಿನಗಳಿಂದ ಐಟಿ ದಾಳಿಯಿಂದಾಗಿ ಮನೆಯಲ್ಲೇ ಉಳಿಯುವಂತಾಗಿತ್ತು. ಇಂದು ಬೆಳ್ಳಂ ಬೆಳಿಗ್ಗೆ ಐಟಿ ಅಧಿಕಾರಿಗಳು ತಪಾಸಣೆ ಮುಗಿಸಿ ಮನೆಯಿಂದ ಹೋಗುತ್ತಿದ್ದಂತೆ ಸುದೀಪ್ ನೇರವಾಗಿ ಬಿಗ್ ಬಾಸ್ ಶೂಟಿಂಗ್ ಗೆ ತೆರಳಿದ್ದಾರೆ. ತಮ್ಮ ಬ್ಯುಸಿ ಶೆಡ್ಯೂಲ್ ನಡುವೆ ಅವರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ.

ಆದರೆ ರಾಕಿಂಗ್ ಸ್ಟಾರ್ ಯಶ್ ಮತ್ತು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ವಿತರಕ ಜಯಣ್ಣ ಮುಂತಾದವರಿಗೆ ಐಟಿ ಡ್ರಿಲ್ ಮುಂದುವರಿದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ