ಬೆಂಗಳೂರು: ಥಗ್ಸ್ ಆಫ್ ಲೈಫ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ನಿಷೇಧದ ಭೀತಿ ಎದುರಾಗಿರುವ ಹಿನ್ನಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ಕಮಲ್ ಹಾಸನ್ ಗೆ ಹೈಕೋರ್ಟ್ ನಿಂದಲೇ ಛೀಮಾರಿ ಸಿಕ್ಕಿದೆ.
ಥಗ್ಸ್ ಆಫ್ ಲೈಫ್ ಈವೆಂಟ್ ನಲ್ಲಿ ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದು ಕಮಲ್ ಹಾಸನ್ ವಿವಾದ ಸೃಷ್ಟಿಸಿದ್ದರು. ಹೀಗಾಗಿ ಇಂದು 12 ಗಂಟೆಯೊಳಗೆ ಕ್ಷಮೆ ಕೇಳದೇ ಇದ್ದರೆ ಅವರ ಸಿನಿಮಾ ಬಿಡುಗಡೆಗೆ ನಿಷೇಧ ಹೇರಲಾಗುತ್ತದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚರಿಕೆ ನೀಡಿತ್ತು.
ಆದರೆ ಕಮಲ್ ಹಾಸನ್ ಕ್ಷಮೆ ಕೇಳಲು ಒಪ್ಪಿಲ್ಲ. ಅವರ ಪರವಾಗಿ ಚಿತ್ರತಂಡ ಕರ್ನಾಟಕ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿತ್ತು. ಸಿನಿಮಾ ಬಿಡುಗಡೆಗೂ ಕಮಲ್ ಹೇಳಿಕೆಗೂ ಸಂಬಂಧವಿಲ್ಲ. ಹೀಗಾಗಿ ನಿಷೇಧ ಹೇರಲು ಅವಕಾಶ ಕೊಡಬಾರದು ಎಂದು ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ನಾಗಪ್ರಸನನ್ನ ನೇತೃತ್ವದ ಪೀಠ ಕಮಲ್ ಹಾಸನ್ ಗೆ ಛೀಮಾರಿ ಹಾಕಿದೆ. ನಿಮ್ಮ ಒಂದು ಹೇಳಿಕೆಯಿಂದ ಸಮಸ್ಯೆ ಬಗೆಹರಿಯಬಹುದು. ಆದೇಶ ಹೊರಡಿಸಲು ನಮಗೆ ಸಮಸ್ಯೆಯಿಲ್ಲ. ನೀವು ಕ್ಷಮೆ ಕೇಳಲಾಗದಿದ್ದರೆ ಕರ್ನಾಟಕದಲ್ಲಿ ಸಿನಿಮಾ ಕೂಡಾ ಯಾಕೆ ಬಿಡುಗಡೆಯಾಗಬೇಕು? ನಾನೂ ಥಗ್ ಲೈಫ್ ಸಿನಿಮಾ ನೋಡಲು ಬಯಸಿದ್ದೆ. ಆದರೆ ಈ ವಿವಾದದಿಂದ ನೋಡಲು ಸಾಧ್ಯವಿಲ್ಲ. ನಿಮ್ಮ ಹೇಳಿಕೆಯಿಂದ ಕನ್ನಡಿಗರ ಮನಸ್ಸಿಗೆ ಘಾಸಿಯಾಗಿದೆ. ಅವರ ಭಾಷಾಭಿಮಾನವನ್ನು ಕೆರಳಿಸುವಂತೆ ಮಾಡಿದ್ದೀರಿ ಎಂದು ಗರಂ ಆಗಿ ಕೋರ್ಟ್ ಪ್ರಶ್ನೆ ಮಾಡಿದೆ.
ಈ ಹಿಂದೆ ಸಿ ರಾಜಗೋಪಾಲಾಚಾರಿ ಇಂತಹದ್ದೇ ಹೇಳಿಕೆ ನೀಡಿದ್ದರು. ಆದರೆ ನಂತರ ಅವರು ಕ್ಷಮೆ ಯಾಚನೆ ಮಾಡಿದ್ದರು. ಆದರೆ ಕಮಲ್ ಕ್ಷಮೆ ಕೇಳಿಲ್ಲ. ವಾಣಿಜ್ಯ ಉದ್ದೇಶದಿಂದ ಸಿನಿಮಾ ಮಾಡಿದ್ದೀರಿ. ನಿಮ್ಮತಪ್ಪಿಗೆ ಪೊಲೀಸರು ಯಾಕೆ ಭದ್ರತೆ ಕೊಡಬೇಕು? ನಿಮ್ಮ ನಿಲುವೇನು ಸ್ಪಷ್ಟನೆ ಕೊಡಬೇಕು ಎಂದು ಕೋರ್ಟ್ ಹೇಳಿದ್ದು ವಿಚಾರಣೆಯನ್ನು ಅಪರಾಹ್ನ 2.30 ಕ್ಕೆ ಮುಂದೂಡಿದೆ.