ಚೆನ್ನೈ: ಕನ್ನಡ ವಿವಾದದ ಮೂಲಕ ಕಮಲ್ ಹಾಸನ್ ತಮ್ಮ ಥಗ್ಸ್ ಆಫ್ ಲೈಫ್ ಸಿನಿಮಾಗೆ ಪುಕ್ಸಟೆ ಪ್ರಚಾರ ಪಡೆದುಕೊಂಡರಾ? ಹೀಗಂತ ಈಗ ಸಾರ್ವಜನಿಕರಿಂದ ಅಭಿಪ್ರಾಯ ಕೇಳಿಬರುತ್ತಿದೆ.
ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದಿದ್ದ ಕಮಲ್ ಹಾಸನ್ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡದ ಬಗ್ಗೆ ಹೇಳಿಕೆ ನೀಡಿರುವ ಕಮಲ್ ಹಾಸನ್ ಕ್ಷಮೆ ಕೇಳಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ.
ಕಮಲ್ ಹಾಸನ್ ಅದ್ಭುತ ಕಲಾವಿದ ಎಂಬುದರಲ್ಲಿ ಎರಡು ಮಾತಿಲ್ಲ. ಸಿನಿ ರಸಿಕರು ಮೆಚ್ಚುವಂತಹ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ದಕ್ಷಿಣ ಭಾರತದ ದಿಗ್ಗಜ ನಟರ ಸಾಲಿನಲ್ಲಿ ಮೇಲ್ಪಂಕ್ತಿಯಲ್ಲಿ ನಿಲ್ಲುವ ನಟ.
ಆದರೆ ಇಂತಹ ನಟ ಇತ್ತೀಚೆಗೆ ರಾಜಕೀಯಕ್ಕೆ ಸೇರಿಕೊಂಡ ಮೇಲೆ ಒಂದು ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಕನ್ನಡದ ಬಗ್ಗೆ ಬೇಡದ ವಿವಾದವನ್ನು ಮೈಮೇಲೆಳೆದುಕೊಂಡಿದ್ದಾರೆ. ಆದರೆ ಇದರಿಂದ ಅವರ ಸಿನಿಮಾಗೆ ಪ್ರಚಾರ ಸಿಕ್ಕಂತಾಗಿರಬಹುದು.
ಕಮಲ್ ಹಾಸನ್ ನಂತಹ ನಟರಿಗೆ ತಮ್ಮ ಸಿನಿಮಾ ಪ್ರಚಾರಕ್ಕೆ ಇಂತಹ ಗಿಮಿಕ್ ಗಳೆಲ್ಲಾ ಬೇಡ. ಅಂತಹ ಸ್ಟಾರ್ ಗಿರಿ ಇರುವ ನಟ ಅವರು. ಹಾಗಿದ್ದರೂ ಇದುವರೆಗೆ ಥಗ್ಸ್ ಆಫ್ ಲೈಫ್ ಸಿನಿಮಾ ಬಗ್ಗೆ ಕರ್ನಾಟಕದಲ್ಲಿ ಅಷ್ಟೊಂದು ಪರಿಚಯವೇ ಇರಲಿಲ್ಲ. ಆದರೆ ಈ ವಿವಾದದಿಂದ ಸಿನಿಮಾ ಬಗ್ಗೆ ಜನರು ತಿಳಿದುಕೊಂಡಂತಾಗಿದೆ. ಕನ್ನಡ ವಿವಾದ ಒಂದು ರೀತಿಯಲ್ಲಿ ಕಮಲ್ ಹಾಸನ್ ಗೆ ಲಾಭವೇ ಉಂಟು ಮಾಡಿರಬಹುದು. ಆದರೆ ಇಷ್ಟು ದಿನ ಅವರು ಮೂಲತಃ ನಮ್ಮವರೇ ಎಂದು ಹೇಳಿಕೊಳ್ಳುತ್ತಿದ್ದ ಕನ್ನಡಿಗರು ಮಾತ್ರ ಅವರ ಮೇಲೆ ಸಿಟ್ಟಾಗಿದ್ದಾರೆ.