ಬೆಂಗಳೂರು: ನನ್ನ ಜೊತೆ ಮುದ್ದಾದ ಹುಡುಗಿ ಇದ್ದಿದ್ದರೆ ನಾನು ಮೊದಲ ವಾರವೇ ಎಲಿಮಿನೇಟ್ ಆಗುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಬಿಗ್ ಬಾಸ್ ನಿಂದ ನಿನ್ನೆಯಷ್ಟೇ ಎಲಿಮಿನೇಟ್ ಆದ ಕರಿಬಸಪ್ಪ ಹೇಳಿಕೆ ನೀಡಿದ್ದಾರೆ.
ನಿನ್ನೆ ಮೊದಲ ವಾರದಲ್ಲೇ ಡಬಲ್ ಎಲಿಮಿನೇಷನ್ ಮಾಡಲಾಗಿತ್ತು. ಕರಿಬಸಪ್ಪ ಮತ್ತು ಆರ್ ಜೆ ಅಮಿತ್ ಮೊದಲ ವಾರವೇ ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ. ಎಲಿಮಿನೇಟ್ ಆದ ಬಳಿಕ ಮಾಧ್ಯಮಗಳಿಗೆ ಕರಿಬಸಪ್ಪ ಪ್ರತಿಕ್ರಿಯಿಸಿದ್ದಾರೆ.
ಮನೆಯೊಳಗೆ ಆರ್ ಜೆ ಅಮಿತ್ ಜೊತೆ ಕರಿಬಸಪ್ಪ ಜಂಟಿಯಾಗಿ ಪ್ರವೇಶಿಸಿದ್ದರು. ವಾರವಿಡೀ ಜಂಟಿಯಾಗಿ ಇಬ್ಬರೂ ಜೊತೆಯಾಗಿ ಆಡಿದ್ದರು. ಇದೀಗ ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ. ಹೊರಗೆ ಬಂದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿರುವ ಕರಿಬಸಪ್ಪ ಅಲ್ಲಿ ಹೇಗೆ ಎಂದರೆ ಮಾತನಾಡಿದರೆ ಎಷ್ಟು ಮಾತನಾಡುತ್ತಾರೆ ಅಂತಾರೆ, ಮಾತನಾಡಿಲ್ಲ ಎಂದರೆ ಮಾತೇ ಆಡಲ್ಲ ಎನ್ನುತ್ತಾರೆ. ಅಲ್ಲಿ ಏನಾಗಿದೆ ಎಂದರೆ ವಿಷಯಗಳೇ ಇರೋಲ್ಲ. ಅಧಿಕ ಪ್ರಸಂಗವೇ ಜಾಸ್ತಿಯಾಗಿದೆ.
ಅನವಶ್ಯಕವಾಗಿ ಡಬಲ್ ಮೀನಿಂಗ್ ಮಾತನಾಡಿಕೊಂಡು, ಕಾಲೆಳೆದುಕೊಂಡು ಇರುವುದು ನನಗೆ ಇಷ್ಟವಿಲ್ಲ. ಇಲ್ಲಾಂದ್ರೆ ಮಾತನಾಡುವುದಕ್ಕಿಂತ ಮೌನವಾಗಿದ್ದುಕೊಂಡು ಗೆಲ್ಲಬಹುದು. ಬೇರೆಯವರೆಲ್ಲರೂ ಯಾಕೆ ಸೇವ್ ಆದ್ರು ಎಂದರೆ ಒಬ್ಬ ಹುಡುಗ-ಹುಡುಗಿ ಇದ್ದರು. ನನ್ನ ಜೊತೆಗೂ ಒಬ್ಬ ಹುಡುಗಿ ಇದ್ದಿದ್ದರೆ ಬಹುಶಃ ಸೇವ್ ಆಗ್ತಿದ್ದೆ ಎಂದಿದ್ದಾರೆ.