ಬಿಗ್ ಬಾಸ್ ವೇದಿಕೆಯಲ್ಲಿ ಐಟಿ ದಾಳಿ ಬಗ್ಗೆ ಕಿಚ್ಚ ಸುದೀಪ್ ಫನ್ನಿ ಟಾಕ್

ಮಂಗಳವಾರ, 8 ಜನವರಿ 2019 (09:48 IST)
ಬೆಂಗಳೂರು: ಎರಡು ದಿನ ಐಟಿ ದಾಳಿಗೊಳಗಾಗಿ ಅಕ್ಷರಶಃ ಗೃಹಬಂಧನ ಎದುರಿಸಿದ್ದ ಕಿಚ್ಚ ಸುದೀಪ್ ಅದಾದ ಬಳಿಕ ಸೀದಾ ಬಿಗ್ ಬಾಸ್ ಶೂಟಿಂಗ್ ಗೆ ತೆರಳಿದ್ದರು. ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಐಟಿ ದಾಳಿ ಬಗ್ಗೆ ನಡೆಸಿದ ಫನ್ನಿ ಟಾಕ್ ಇದೀಗ ವೈರಲ್ ಆಗಿದೆ.


ಮನೆಯಿಂದ ಹೊರ ಬಂದ ಸ್ಪರ್ಧಿ ಒಗ್ಗರಣೆ ಡಬ್ಬಿ ಖ್ಯಾತಿಯ ಮುರಳಿ ಜತೆಗೆ ಬಿಗ್ ಬಾಸ್ ವೇದಿಕೆಯಲ್ಲಿ ಮಾತುಕತೆ ನಡೆಸುತ್ತಿದ್ದ ಸುದೀಪ್ ಮಾತಿನ ನಡುವೆ ಐಟಿ ದಾಳಿ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಮುರಳಿ 30 ಕೋಟಿ ರೂ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂಬ ಖುಷಿಯಿದೆ ಎನ್ನುತ್ತಿದ್ದಂತೇ ಮಧ್ಯಪ್ರವೇಶಿಸಿದ ಸುದೀಪ್ ‘ಸಮ್ನಿರಿ.. 30 ಕೋಟಿ ಅಂತೆಲ್ಲಾ ಹೇಳಬೇಡಿ. ನಿನ್ನೆಯಷ್ಟೇ ಯಾರೋ ಮನೆಗೆ ಬಂದ ಹೋದರು. 30 ಕೋಟಿ ಅಂತೆಲ್ಲಾ ಹೇಳಿದರೆ ಆಮೇಲೆ ಇಲ್ಲಿಗೂ ಬಂದು ಬಿಟ್ಟಾರು. ಬೇಡ ಸಾರ್..’ ಎಂದು ನಗುತ್ತಲೇ ಸುದೀಪ್ ಹಾಸ್ಯ ಮಾಡಿದರು.

ಏನಾಯ್ತು ಸಾರ್ ಎಂದು ಈ ಘಟನೆ ಬಗ್ಗೆ ಅರಿವಿರದ ಮುರಳಿ ಕೇಳಿದಾಗ ‘ಅದೆಲ್ಲಾ ಬಿಡಿ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ನಾಲ್ವರು ಸ್ಟಾರ್ ಕಲಾವಿದರು ಒಂಥರಾ ರಜಾ ತಗೊಂಡಿದ್ರು. ಕೆಲವರಿಗೆ ಇವತ್ತು ಮುಕ್ತಿಯಾಯಿತು. ಇನ್ನು ಕೆಲವರಿಗೆ ನಿನ್ನೆ ಆಯ್ತು. ಶನಿವಾರ ನಿಮ್ಮನ್ನು ಕರೆಯೋಕೆ ಬಂದೆ. ಯಾಮಾರಿದ್ರೆ ನಿಮ್ಮನ್ನು ಕರೆಯೋಕೆ ನಾನು ಇರ್ತಿರಲಿಲ್ಲ’ ಎಂದು ತಮಾಷೆಯಾಗಿ ಐಟಿ ದಾಳಿ ಬಗ್ಗೆ ಹೇಳಿಕೊಂಡಾಗ ಪ್ರೇಕ್ಷಕರು ನಗೆಗಡಲಲ್ಲಿ ಮುಳುಗಿದರು. ಅಷ್ಟಾದರೂ ಮುರಳಿ ಏನೂ ಅರ್ಥವಾಗಲಿಲ್ಲ ಸಾರ್ ಎಂದು ರಾಗ ಎಳೆದಾಗ ನಿಮ್ಮ ಮನೆಯವರಲ್ಲಿ ಆಮೇಲೆ ಕೇಳಿ. ಎಲ್ಲಾ ಗೊತ್ತಾಗುತ್ತೆ ಎಂದು ಮಾತು ಮುಗಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ