ಕನ್ನಡ ನಿರ್ದೇಶಕ ಮನ್ಸೋರೆ ದಾಂಪತ್ಯದಲ್ಲಿ ಬಿರುಕು

Krishnaveni K

ಭಾನುವಾರ, 28 ಜನವರಿ 2024 (09:50 IST)
Photo Courtesy: Twitter
ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಸಿನಿಮಾ ನಿರ್ದೇಶಕ ಮನ್ಸೋರೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇಬ್ಬರೂ ದೂರು ಪ್ರತಿದೂರು ದಾಖಲಿಸಿದ್ದಾರೆ.

ಮನ್ಸೋರೆ ಮತ್ತು ಅಖಿಲಾ ಪರಸ್ಪರ ಪ್ರೀತಿಸಿ 2021 ರಲ್ಲಿ ಮನೆಯವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಆದರೆ ಇದೀಗ ಇಬ್ಬರ ನಡುವೆ ವೈಮನಸ್ಯವೇರ್ಪಟ್ಟಿದೆ. ಮನ್ಸೋರೆ ವಿರುದ್ಧ ಪತ್ನಿ ಅಖಿಲ ದೈಹಿಕ ಹಿಂಸೆ, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದಾರೆ.

ಪತ್ನಿ ದೂರು ನೀಡಿದ ಬೆನ್ನಲ್ಲೇ ಮನ್ಸೋರೆ ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ನನ್ನ ಪತ್ನಿ ಮಾನಸಿಕ ಅಸ್ವಸ್ಥೆ. ಆಕೆಯ ದೂರನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಆಕೆಗೆ ಚಿಕಿತ್ಸೆಯ ಅಗತ್ಯವಿದೆ. ಚಿಕಿತ್ಸೆ ಬಳಿಕ ನಾವಿಬ್ಬರೂ ಜೊತೆಗಿರಬೇಕೇ ಬೇಡವೇ ಎಂದು ತೀರ್ಮಾನಿಸುತ್ತೇವೆ ಎಂದಿದ್ದಾರೆ.

ಸುಬ್ರಹ್ಯಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿ ಮನ್ಸೋರೆ ಕೊವಿಡ್ ಸಮಯದಲ್ಲಿ ನಮ್ಮ ಮನೆಯವರಿಂದ 10 ಲಕ್ಷ ರೂ. ಹಣ ಪಡೆದಿದ್ದರು. ಅಲ್ಲದೆ ಅವರ ತಾಯಿ, ಸಹೋದರಿ 30 ಲಕ್ಷ ರೂ. ಬೆಲೆಯ ಎಸ್ ಯುವಿ ಕಾರಿಗೆ ಬೇಡಿಕೆಯಿಟ್ಟಿದ್ದರು. ಈ ವಿಚಾರವನ್ನು ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಇದಕ್ಕೆ ಪ್ರತಿ ದೂರು ಸಲ್ಲಿಸಿರುವ ಮನ್ಸೋರೆ ಪತ್ನಿಯೇ ತಮ್ಮ ತಾಯಿ ಮೇಲೆ ಹಲ್ಲೆ ನಡೆಸಿರುವುದಾಗಿ ಹೇಳಿದ್ದಾರೆ. ಅಲ್ಲದೆ, ನಾವು ಯಾರೂ ಪತ್ನಿಯ ಮನೆಯಿಂದ ಹಣ ಪಡೆದುಕೊಂಡಿಲ್ಲ ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನನ್ನ ಬ್ಯಾಂಕ್ ಖಾತೆ ಪರಿಶೀಲಿಸಬಹುದು ಎಂದಿದ್ದಾರೆ. ದೂರು ನೀಡುವ ಮುಂಚೆ ನನ್ನ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ವಿಡಿಯೋ ಮತ್ತು ತಾಯಿಗೆ ನಿಂದಿಸಿ ಹಲ್ಲೆ ಮಾಡಿದ ವಿಡಿಯೋ ಸಾಕ್ಷಿ ನನ್ನ ಬಳಿ ಇದೆ’ ಎಂದು ಮನ್ಸೋರೆ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ