ರಾಹುಲ್ ಗಾಂಧಿ ವಶಕ್ಕೆ ಪಡೆದ ಪೊಲೀಸರು

Krishnaveni K

ಸೋಮವಾರ, 11 ಆಗಸ್ಟ್ 2025 (13:23 IST)
ನವದೆಹಲಿ: ಮತಗಳ್ಳತನ ಆರೋಪಿಸಿ ಸಂಸತ್ ಭವನದಿಂದ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಅನುಮತಿಯಿಲ್ಲದೇ ಮೆರವಣಿಗೆ ಹೊರಟಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ದೇಶದ ಹಲವು ಕ್ಷೇತ್ರಗಳಲ್ಲಿ ಮತಗಳ್ಳತನ ನಡೆದಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಸಮರ ಸಾರಿದ್ದಾರೆ. ಇಂದು ಪ್ರತಿಭಟನಾ ಮೆರವಣಿಗೆ ಹೊರಟಿದ್ದರು.

ಆದರೆ ಮೆರವಣಿಗೆ ಮಾಡಲು ರಾಹುಲ್ ಗಾಂಧಿ ಅನುಮತಿ ಪಡೆದಿರಲಿಲ್ಲ. ಹೀಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ಅವರು ಈವತ್ತು ನಾವು ಚುನಾವಣಾ ಆಯೋಗದ ಕಚೇರಿಗೆ ತೆರಳುವಾಗ ನನ್ನನ್ನು ಮತ್ತು ಇಂಡಿಯಾ ಒಕ್ಕೂಟದ ನಾಯಕರನ್ನು ವಶಕ್ಕೆ ಪಡೆದು ತಡೆಯಲಾಗಿದೆ.  ಮತಗಳ್ಳತನದ ಸತ್ಯ ಈಗ ದೇಶದ ಮುಂದಿದೆ. ಇದು ರಾಜಕೀಯದ ಹೋರಾಟವಲ್ಲ ಬದಲಾಗಿ ಪ್ರಜಾಪ್ರಭುತ್ವ, ಒಬ್ಬ ವ್ಯಕ್ತಿ, ಒಂದು ಮತ ಎಂಬ ಸಾಂವಿಧಾನಿಕ ಹಕ್ಕುಗಳ ರಕ್ಷಣೆಗಾಗಿ ನಡೆಸುವ ಹೋರಾಟವಾಗಿದೆ. ಪ್ರತಿಪಕ್ಷಗಳು ಮತ್ತು ದೇಶದ ಜನತೆ ಸ್ವಚ್ಛ ಮತ್ತು ಪಾರದರ್ಶಕ ಮತಪಟ್ಟಿಗಾಗಿ ಆಗ್ರಹಿಸುತ್ತಿವೆ. ಯಾವ ಬೆಲೆ ತೆತ್ತಾದರೂ ಇದನ್ನು ನಾವು ರಕ್ಷಿಸಿಕೊಳ್ಳಲಿದ್ದೇವೆ ಎಂದಿದ್ದಾರೆ.

ರಾಹುಲ್ ಜೊತೆಗೆ ಇಂಡಿಯಾ ಒಕ್ಕೂಟದ ಅನೇಕ ನಾಯಕರನ್ನು ವಶಕ್ಕೆ ಪಡೆಯಲಾಗಿದೆ. ಮೊನ್ನೆಯಷ್ಟೇ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಮತಗಳ್ಳತನದ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ ನಡೆದಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ