ನಿಮಗೆ ಕಷ್ಟ ಬಂದಾಗ ಸಹಾಯ ಮಾಡಿದ್ದು ನಮ್ಮ ಸ್ಟಾರ್: ಪುನೀತ್ ಫ್ಯಾನ್ಸ್ ಆಕ್ರೋಶ

ಭಾನುವಾರ, 4 ಏಪ್ರಿಲ್ 2021 (09:16 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಅವರ ಯುವರತ್ನ ತಂಡಕ್ಕೆ ಆದ ಅನ್ಯಾಯದ ವಿರುದ್ಧ ಅವರ ಅಭಿಮಾನಿಗಳೂ ಸಿಡಿದೆದ್ದಿದ್ದರು.


ಚಿತ್ರಮಂದಿರದಲ್ಲಿ ಶೇ.50 ಮಂದಿಗೆ ಮಾತ್ರ ಅವಕಾಶ ನೀಡುವುದಾಗಿ ದಿಡೀರ್ ಆಗಿ ಸರ್ಕಾರ ಘೋಷಣೆ ಮಾಡಿದ್ದರಿಂದ ಯುವರತ್ನ ತಂಡ ಸಾಕಷ್ಟು ನಷ್ಟ ಅನುಭವಿಸಿತ್ತು. ಗುರುವಾರವಷ್ಟೇ ಚಿತ್ರ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಎರಡೇ ದಿನಕ್ಕೆ ಸರ್ಕಾರ ಇಂತಹದ್ದೊಂದು ನಿರ್ಧಾರ ಕೈಗೊಂಡಿದ್ದರಿಂದ ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರಿತ್ತು. ಇದು ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಕೊರೋನಾ ಬಂದಾಗ ಪುನೀತ್ ಸರ್ಕಾರಕ್ಕೆ 50 ಲಕ್ಷ ರೂ.ಗಳ ದೇಣಿಗೆ ನೀಡಿ ದೊಡ್ಡತನ ಮೆರೆದಿದ್ದರು. ಆದರೆ ಅವರ ವಿಶಾಲ ಹೃದಯಕ್ಕೆ ಸರ್ಕಾರ ಕೊಟ್ಟ ಬಹುಮಾನ ಇದೇನಾ? ಎಂದು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ಹೊರಹಾಕಿದ್ದರು.  ಆದರೆ ಕೊನೆಗೂ ಯುವರತ್ನ ತಂಡದ ಒತ್ತಾಯಕ್ಕೆ ಮಣಿದು ಸರ್ಕಾರ ಮೂರು ದಿನಗಳ ವಿನಾಯ್ತಿ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ