ದರ್ಶನ್ ಮೇಲೆ ಹೊಸಪೇಟೆಯಲ್ಲಿ ಅಹಿತಕರ ಘಟನೆ- ಮೂವರು ಅರೆಸ್ಟ್, ನ್ಯಾಯಾಂಗ ಬಂಧನ

ಸೋಮವಾರ, 26 ಡಿಸೆಂಬರ್ 2022 (16:31 IST)
ದರ್ಶನ್ ಅವರ ಕ್ರಾಂತಿ ಚಿತ್ರದ ಧ್ವನಿಸುರುಳಿ ಬಿಡುಗಡೆ ವೇಳೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಮೂವರು ಕಿಡಿಗೇಡಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಲ್ ಶ್ರೀಹರಿಬಾಬು ತಿಳಿಸಿದ್ದಾರೆ.
 
ಡಿಸೆಂಬರ್ 18ರಂದು ಹೊಸಪೇಟೆ ನಗರದ ವಾಲ್ಮೀಕಿ ವೃತ್ತದಲ್ಲಿ ಈ ಅಹಿತಕರ ಘಟನೆ ನಡೆದಿತ್ತು. ಅಂದು ದರ್ಶನ್ ನಟನೆಯ ಕ್ರಾಂತಿ ಚಿತ್ರದ 'ಬೊಂಬೆ.. ಬೊಂಬೆ..' ಹಾಡು ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ‌ ಸಂದರ್ಭದಲ್ಲಿ ದರ್ಶನ್ ಅವರ ಮೇಲೆ ಕಿಡಿಗೇಡಿಗಳು ಶೂ ಎಸೆದಿದ್ದರು. ಇದಕ್ಕೂ ಮುನ್ನ ದರ್ಶನ್ ಭಾವಚಿತ್ರವಿರುವ ಪೋಸ್ಟರ್, ಬ್ಯಾನರ್ ಹರಿದು ಹಾಕಿದ್ದರು.
 
ಈ ಘಟನೆ ಸಂಬಂಧ ಕಾರ್ಯಕ್ರಮ ಆಯೋಜಕರು ನೀಡಿದ ದೂರಿನ ಮೇರೆಗೆ ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ, ಆರೋಪಿಗಳ ಪತ್ತೆಗೆ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಇದೀಗ ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದವರ ಪತ್ತೆ ಕಾರ್ಯ ನಡೆದಿದೆ ಎಂದು ಎಸ್ಪಿ ಶ್ರೀಹರಿಬಾಬು ಮಾಹಿತಿ ನೀಡಿದ್ದಾರೆ.
 
ಎಸ್ಪಿ ಶ್ರೀಹರಿಬಾಬು ಮಾರ್ಗದರ್ಶನದಲ್ಲಿ ಹೊಸಪೇಟೆ ನಗರ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಬಾಳನಗೌಡ ನೇತೃತ್ವದ ತಂಡದಲ್ಲಿ ಪಿಎಸ್ಐ ಮುನಿರತ್ನಂ, ಸಿಬ್ಬಂದಿ ರಾಘವೇಂದ್ರ, ಪ್ರಕಾಶ್ ಕಳಕರೆಡ್ಡಿ, ಶ್ರೀನಿವಾಸ್, ಜಾವೇದ್, ಪರಶುರಾಮ ನಾಯ್ಕ ಇದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ