ಸಿಸಿಬಿ ಅಧಿಕಾರಿಗಳ ಎದುರು ಶರಣಾದ ಆರೋಪಿ ಗೀತಾ ವಿಷ್ಣು

ಬುಧವಾರ, 4 ಅಕ್ಟೋಬರ್ 2017 (09:42 IST)
ಬೆಂಗಳೂರು: ಪೊಲೀಸರ ಕಣ್ತಪ್ಪಿಸಿ ಮಲ್ಯ ಆಸ್ಪತ್ರೆಯಿಂದ ಪರಾರಿಯಾಗಿದ್ದ ಉದ್ಯಮಿ ದಿ. ಆದಿಕೇಶವುಲು ಮೊಮ್ಮಗ ಗೀತಾ ವಿಷ್ಣು ನಿನ್ನೆ ರಾತ್ರಿ ಸಿಸಿಬಿ ಅಧಿಕಾರಿಗಳ ಮುಂದೆ ಶರಣಾಗಿದ್ದಾನೆ.

ಸೆ. 27ರಂದು ಅಪಘಾತವೆಸಗಿದ ಬಳಿಕ ಮಲ್ಯ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ವಿಷ್ಣು, ಸೆ. 29ರಂದು ಬೆಳಗ್ಗೆ ಪೊಲೀಸರ ಕಣ್ಣು ತಪ್ಪಿಸಿ ಆಸ್ಪತ್ರೆ ಸಿಬ್ಬಂದಿ ಹಾಗೂ ತನ್ನ ಸಹೋದರಿ ಚೈತನ್ಯ ಸಹಾಯದಿಂದ ನಾಪತ್ತೆಯಾಗಿದ್ದ.

ನಾನು ಗಾಂಜಾ ಸೇವಿಸಿರಲಿಲ್ಲ. ನನ್ನ ತಂದೆ ಹೋಟೆಲ್ ನಲ್ಲಿ ನಾನೇ ಪಾರ್ಟಿ ಆಯೋಜಿಸಿದ್ದೆ. ಪಾರ್ಟಿ ಮುಗಿಸಿ ಮನೆಗೆ ಹೋಗುವಾಗ ಘಟನೆ ನಡೆದಿದೆ ಎಂದು ಆರೋಪಿ ವಿಷ್ಣು ಸಿಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಕಾರಿನಲ್ಲಿ ಗಾಂಜಾ ಇತ್ತು ಎನ್ನುವ ಸುದ್ದಿ ಹರಿದಾಡಿದ್ದರಿಂದ ಹೆದರಿ ಗನ್ ಮ್ಯಾನ್ ಜತೆ ಪರಾರಿಯಾಗಿದ್ದೆ.

ಮೊದಲು ಚೆನ್ನೈಗೆ ತೆರಳಿದ್ದೆ. ನಂತರ ಅಲ್ಲಿಗೂ ಪೊಲೀಸರು ಬರುತ್ತಿರುವ ಸುದ್ದಿ ತಿಳಿದು ಮರಳಿ ಸದಾಶಿವ ನಗರಕ್ಕೆ ಬಂದಿದ್ದೆ. ನನ್ನ ಕಾರಿನಲ್ಲಿ ಗಾಂಜಾ ಇರಲಿಲ್ಲ. ನನಗೆ ಗಾಂಜಾ ಸೇವಿಸುವ ಅಭ್ಯಾಸ ಇಲ್ಲ ಎಂದು ಆರೋಪಿ ವಿಷ್ಣು ಪೊಲೀಸರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾನೆ ಎನ್ನಲಾಗುತ್ತಿದೆ. ಅಪಘಾತವಾದ ಬಳಿಕ ವಿಷ್ಣು ಕಾರಿನಲ್ಲಿ 110 ಗ್ರಾಂ ಗಾಂಜಾ ಪತ್ತೆಯಾಗಿರುವುದನ್ನು ದಕ್ಷಿಣ ವಿಭಾಗ ಡಿಸಿಪಿ ಡಾ.ಶರಣಪ್ಪ ದೃಢಪಡಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ