ಅರ್ಜುನ ಆನೆ ಹೆಸರಿನಲ್ಲಿ ನಟ ದರ್ಶನ್ ಗೆ ವಂಚನೆ

Krishnaveni K

ಸೋಮವಾರ, 27 ಮೇ 2024 (12:02 IST)
ಬೆಂಗಳೂರು: ಮೈಸೂರಿನ ಅಂಬಾರಿ ಆನೆ ಅರ್ಜುನನ ಸಮಾಧಿ ನಿರ್ಮಾಣ ವಿಚಾರದಲ್ಲಿ ನಟ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ಓರ್ವ ವ್ಯಕ್ತಿ ಸೋಷಿಯಲ್ ಮೀಡಿಯಾ ಮೂಲಕ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ನಟ ದರ್ಶನ್ ಅಂಬಾರಿ ಆನೆಗೆ ಸಮಾಧಿ ಕಟ್ಟಲು ಮುಂದಾಗಿದ್ದರು. ಇದಕ್ಕಾಗಿ 30 ಸಾವಿರ ರೂ. ಮೌಲ್ಯದ ಕಲ್ಲನ್ನು ಸಮಾಧಿ ಬಳಿ ತರಿಸಿ ಹಾಕಿದ್ದರು. ಆದರೆ ಇದರ ನಡುವೆ ಅರಣ್ಯ ಇಲಾಖೆ ಈ ಹಣವನ್ನು ದರ್ಶನ್ ಮರಳಿಸಿ ತಾನೇ ಸಮಾಧಿ ಕಟ್ಟಲು ಮುಂದಾಗಿದೆ ಎಂದು ವರದಿಯಾಗಿತ್ತು. ಆದರೆ ಅಸಲಿ ಕತೆ ಬೇರೇನೇ ಇದೆ.

ನವೀನ್ ಎಂಬ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಅರ್ಜುನ ಪಡೆ ಎಂದು ವ್ಯಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿ ಹಣ ಸಂಗ್ರಹಣೆ ಮಾಡುತ್ತಿದ್ದಾನೆ. ಈತನ ಮಾತು ನಂಬಿ ಅನೇಕರು ಹಣ ಕಳುಹಿಸಿದ್ದಾರೆ. ಇದರಿಂದ ಆತ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ್ದಾನೆ. ಅಷ್ಟೇ ಅಲ್ಲ, ದರ್ಶನ್ ಪಿಎಯನ್ನೂ ಸಂಪರ್ಕಿಸಿ ಕಲ್ಲು ತರಿಸಿಕೊಂಡಿದ್ದಾನೆ. ಬಳಿಕ ಅದೇ ಕಲ್ಲನ್ನು ಅರಣ್ಯ ಇಲಾಖೆಗೆ ಮಾರಿ 30 ಸಾವಿರ ರೂ. ಪೀಕಿದ್ದಾನೆ ಎಂದು ತಿಳಿದುಬಂದಿದೆ.

ದರ್ಶನ್ ಏನೋ ಒಳ್ಳೆಯ ಉದ್ದೇಶದಿಂದ ಸಮಾಧಿ ಕಟ್ಟಲು ಸಹಾಯ ಮಾಡಿದ್ದಾರೆ. ಆದರೆ ಅವರ ಅಭಿಮಾನಿ ಎಂದು ಹೇಳಿಕೊಂಡು ಇಲ್ಲೊಬ್ಬವಂಚಕ ಜನರಿಗೇ ಟೋಪಿ ಹಾಕಲು ಪ್ರಯತ್ನಿಸುತ್ತಿದ್ದಾನೆ. ಇಂತಹವರ ಬಗ್ಗೆ ಎಚ್ಚರವಾಗಿರಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ