ದರ್ಶನ್ ಕೊಟ್ಟ ಹಣ ಬೇಡವೆಂದು ತಾವೇ ಸ್ಮಾರಕ ನಿರ್ಮಾಣ ಮಾಡಲು ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳು

sampriya

ಶನಿವಾರ, 25 ಮೇ 2024 (18:43 IST)
Photo By X
ಹಾಸನ: ಕಾಡಾನೆ ಜೊತೆಗಿನ ಕಾದಾಟದಲ್ಲಿ ವೀರ ಮರಣವಪ್ಪಿದ ಅಂಬಾರಿ ಹೊತ್ತಿರುವ ಅರ್ಜುನ (೬೩)ನ ಸ್ಮಾರಕ ಅಭಿವೃದ್ಧಿಗೆ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ನೀಡಿದ ಹಣವನ್ನು ಅರಣ್ಯ ಇಲಾಖೆ ವಾಪಾಸ್‌ ನೀಡಿದೆ ಎಂದು ತಿಳಿದುಬಂದಿದೆ.

ಅಂಬಾರಿ ಅರ್ಜುನ ಸ್ಮಾರಕ ನಿರ್ಮಾಣಕ್ಕಾಗಿ ನಟ ದರ್ಶನ್ ಖರ್ಚು ಮಾಡಿದ ಹಣವನ್ನು ಅರಣ್ಯಾಧಿಕಾರಿಗಳು ಹಿಂದಿರುಗಿಸಿದ್ದಾರೆ.  ದರ್ಶನ್ ಮಾರ್ಬಲ್ ಸ್ಟೋನ್ಸ್ ನೀಡಲು 30,000 ಖರ್ಚು ಮಾಡಿದ್ದಾರೆ. ಇದೀಗ ಅರಣ್ಯಾಧಿಕಾರಿಗಳು ಫೋನ್ ಪೇ ಮೂಲಕ ಹಣ ವಾಪಸ್ ಕಳುಹಿಸಿದ್ದಾರೆ ಎನ್ನಲಾಗಿದೆ.

ಅರ್ಜುನ ಸ್ಮಾರಕಕ್ಕೆ ದರ್ಶನ್‌ ಅವರು ಹಣ ಖರ್ಚು ಮಾಡುವುದು ಅರಣ್ಯ ಇಲಾಖೆಗೆ ಇಷ್ಟವಿಲ್ಲ. ಅದರ ಬದಲು ದರ್ಶನ್‌ ನೀಡಿದ ಸಾಮಾಗ್ರಿಗಳನ್ನು ಅರ್ಜುನನ ಸ್ಮಾರಕಕ್ಕೆ ಬಳಸಿಕೊಂಡಿದೆ. ಬಳಸಿದ ಸಾಮಾಗ್ರಿಗಳ ಹಣವನ್ನು ದರ್ಶನ್‌ ಅವರಿಗೆ ಅರಣ್ಯ ಇಲಾಖೆ ವಾಪಾಸ್‌ ನೀಡಿದೆ ಎಂಬ ಸುದ್ದಿಯಿದೆ.

 

ಸಕಲೇಶಪುರ ತಾಲ್ಲೂಕು ದಬ್ಬಳಿಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರ್ಜುನನ ಸಮಾಧಿ ಜಾಗದಲ್ಲಿ ಸ್ಮಾರಕ ನಿರ್ಮಿಸಬೇಕೆಂದು ನಟ ದರ್ಶನ್‌ ಅವರು ಹೇಳಿದ್ದರು. ಅದರ ಬೆನ್ನಲ್ಲೇ ಅವರು ಹಣವನ್ನು ನೀಡಿದ್ದರು. ಅದಲ್ಲದೆ ಅವರ ಅಭಿಮಾನಿಗಳು ಹಾಸು ಕಲ್ಲುಗಳನ್ನು ತಂದು ಸ್ಮಾರಕ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ ಇದಕ್ಕೆ ಅರಣ್ಯ ಇಲಾಖೆ ತಡೆಯೊಡ್ಡಿದ್ದು, ಸರ್ಕಾರವೇ ಸ್ಮಾರಕ ನಿರ್ಮಿಸುವುದಾಗಿ ಘೋಷಿಸಿರುವುದರಿಂದ ಖಾಸಗಿ ವ್ಯಕ್ತಿಗಳ ಸಹಾಯ ಬೇಕಿಲ್ಲ ಎಂದಿದೆ.

ಇನ್ನೂ ಸ್ಮಾರಕ ನಿರ್ಮಾಣ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಡಿ ಬಾಸ್‌ ದರ್ಶನ್‌ ಅವರು, ʼದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ.ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದುʼ ಎಂದು ಬರೆದುಕೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ