ಕಾರವಾರ: ಅಹಮದಾಬಾದ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ 171 ದುರಂತದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿಗಾಗಿ ಪಿತೃ ಪಕ್ಷ ಹಿನ್ನೆಲೆ ಗೋಕರ್ಣದಲ್ಲಿ ಪಿತೃಕಾರ್ಯ ನೆರವೇರಿಸಲಾಯಿತು.
ಜೂನ್ 12 ರಂದು ಸಂಭವಿಸಿದ ಭೀಕರ ದುರಂತದಲ್ಲಿ 260 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಭಾರತ ಹಾಗೂ ಲಂಡನ್ ಪ್ರಜೆಗಳು ಸಹ ಅಸುನೀಗಿದ್ದರು. ಈ ಘಟನೆ ನಡೆದು ನಾಲ್ಕು ತಿಂಗಳ ನಂತರ ಮೃತರ ಆತ್ಮಕ್ಕೆ ಶಾಂತಿಗಾಗಿ ಪಿತೃ ಪಕ್ಷ ಹಿನ್ನೆಲೆಯಲ್ಲಿ ಗೋಕರ್ಣದಲ್ಲಿ ಮೃತರ ಪಿತೃಕಾರ್ಯ ನೆರವೇರಿಸಲಾಗಿದೆ.
ಇನ್ನೂ ಗೋಕರ್ಣ ಪಿತೃಕಾರ್ಯಕ್ಕೆ ಪ್ರಾಮುಖ್ಯತೆ ಪಡೆದಿದ್ದು, ಇಲ್ಲಿ ಮೃತರ ಕುಟುಂಬದವರು ಪಿಂಡ ಪ್ರದಾನ ಮಾಡಿ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಬೇಡಿಕೊಳ್ಳುವುದು ಸಂಪ್ರದಾಯ. ದೇಶ ವಿದೇಶದಿಂದಲೂ ಪಿತೃಪಕ್ಷದ ಸಂದರ್ಭದಲ್ಲಿ ಗೋಕರ್ಣಕ್ಕೆ ಬಂದು ಪಿತೃಕಾರ್ಯ ನಡೆಸಿ, ಇಲ್ಲಿಯೇ ಅಸ್ತಿ ವಿಸರ್ಜಿಸುತ್ತಾರೆ. ಹೀಗಾಗಿ, ಮಹಾಬಲೇಶ್ವರ ದೇವಸ್ಥಾನ ಕಾಶಿಯಷ್ಟೇ ಪ್ರಾಮುಖ್ಯತೆ ಇದೆ.
ಇದೀಗ ಅಹಮದಾಬಾದ್ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಪುಣ್ಯಾಶ್ರಮದಲ್ಲಿ ಪಿತೃಕಾರ್ಯ ನಡೆಸಲಾಗಿದೆ.
ದೇಶದಲ್ಲಿ ನಡೆದ ದೊಡ್ಡ ದುರಂತದ ಸಾಲಿಗೆ ಈ ವಿಮಾನ ದುರಂತ ಸೇರಿಹೋಗಿತ್ತು. ಹೀಗಾಗಿ ದುರಂತದಲ್ಲಿ ಮಡಿದ ಪ್ರತಿಯೊಬ್ಬರ ಹೆಸರನ್ನೂ ಸಹ ಪಡೆದು ಅವರ ಹೆಸರಲ್ಲಿ ಎಳ್ಳು-ನೀರಿನ ಅರ್ಗೆ ಸಮರ್ಪಿಸಿ ಪಿಂಡ ಪ್ರದಾನವನ್ನು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ರಾಜು ಅಡಿಯವರು ತಮ್ಮ ಪುಣ್ಯಾಶ್ರಮದಲ್ಲಿ ನೆರವೇರಿಸಿದರು.