ತಂಗಿಯನ್ನ ಪ್ರೀತಿಸಿ ಮದುವೆಯಾದವನ ಕೈ ಕಟ್ ಮಾಡಿದ ಅಣ್ಣ

ಶುಕ್ರವಾರ, 16 ಆಗಸ್ಟ್ 2019 (17:32 IST)
ತನ್ನ ತಂಗಿಯನ್ನ ಪ್ರೀತಿಸಿ ವಿವಾಹವಾಗಿದ್ದ ಎಂಬ ಕಾರಣಕ್ಕೆ ಭಾವನಿಗೆ ಚಾಕುವಿನಿಂದ ಹಲ್ಲೆ ಮಾಡಿ ಬೆರಳನ್ನು ಕತ್ತರಿಸಿದ ಘಟನೆ ನಡೆದಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಪೀಣ್ಯ ನಿವಾಸಿ ಹನುಮಂತ ಹಲ್ಲೆಗೊಳಗಾಗಿರುವ ವ್ಯಕ್ತಿ. ಸಂತೋಷ್ ಹಲ್ಲೆ ಮಾಡಿದ ಆರೋಪಿ.

 ಗಾಯಗೊಂಡಿರೋ ಹನುಮಂತ ಸಂತೋಷನ ಅತ್ತೆಯ ಮಗನೇ ಆಗಿದ್ದಾನೆ. 2018 ರಲ್ಲಿ ಸಂತೋಷನ ತಂಗಿ ಸಂಗೀತಾ ಹಾಗು ಹನುಮಂತ  ಮನೆಯಲ್ಲಿ ಗೊತ್ತಿಲ್ಲದೆ ಪ್ರೇಮ ವಿವಾಹವಾಗಿ ಬೇರೆಡೆ ವಾಸವಿದ್ದರು ಎನ್ನಲಾಗಿದೆ.  ಕಾರೊಂದನ್ನು ವಾಪಸ್ಸು ನೀಡಲು ಬಂದಾಗ ಅದೇ  ಸಂದರ್ಭದಲ್ಲಿ ಸಂಗೀತಾಳ ಅಣ್ಣ ಸಂತೋಷ ಹಾಗು ಸ್ನೇಹಿತ ಪ್ರೇಮ್ ಕೂಡಿಕೊಂಡು  ಹನುಮಂತನನ್ನು ಪಕ್ಕಕ್ಕೆ ಕರೆದು ಕೈ ಬೆರಳನ್ನು ಕಟ್ ಮಾಡಿದ್ದಾರೆ. ಸಂತೋಷ್ ಹನುಮಂತನ ಎದೆಗೆ ಚಾಕುವಿನಿಂದ ಇರಿಯುವ ಸಂದರ್ಭದಲ್ಲಿ ತಡೆಯೊಡ್ಡಿದಾಗ ಹನುಮಂತನ ಎಡಗೈಗೆ ಹರಿತವಾದ ಚಾಕುವಿನಿಂದ ಕಿರುಬೆರಳು ತುಂಡಾಗಿದೆ.

ಸಂಗೀತಾಳ ಪ್ರೇಮ ವಿವಾಹದಿಂದ ರೊಚ್ಚಿಗೆದ್ದು ಹನುಮಂತನಿಗಾಗಿ ಕಾಯುತ್ತಲಿದ್ದ ಸಂತೋಷ ಮಾರಣಾಂತಿಕವಾಗಿ ಹಲ್ಲೆಗೆ ಯತ್ನಿಸಿದ್ದನು. ಪರಪ್ಪನ ಅಗ್ರಹಾರಕ್ಕೆ ಬೆರಳು ಕತ್ತರಿಸಿದ ಸ್ಥಿತಿಯಲ್ಲಿ ಗಾಯಾಳು ಹನುಮಂತ ಪೊಲೀಸ್ ಠಾಣೆಗೆ ಭೇಟಿನೀಡಿ ದೂರು ದಾಖಲಿಸಿದ್ದಾನೆ. ಕೂಡಲೇ ಎಚ್ಚೆತ್ತ ಪರಪ್ಪನ ಅಗ್ರಹಾರ ಪೊಲೀಸರು ಆರೋಪಿಗಳಾದ ಸಂತೋಷ್, ಪ್ರೇಮ್ ನನ್ನು ಬಂಧಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ