ಔರಂಗಜೇಬ್‌ ಫ್ಲೆಕ್ಸ್‌ ಗಿರುವ ಅನುಮತಿ ಹನುಮಧ್ವಜಕ್ಕಿಲ್ಲವೇ ? – ಬಿಜೆಪಿ ವಾಗ್ದಾಳಿ

geetha

ಸೋಮವಾರ, 29 ಜನವರಿ 2024 (19:21 IST)
ಬೆಂಗಳೂರು :  ಕೆರೆಗೋಡು  ಹನುಮಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ (BJP) ರಾಜ್ಯಾದ್ಯಂತ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದೆ. ಈ ಕುರಿತು ಕಾಂಗ್ರೆಸ್‌ ವಿರುದ್ದ ತೀವ್ರವಾಗಿ ಕಿಡಿಕಾರಿರುವ ಬಿಜೆಪಿ ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಸರಣಿ ಸಂದೇಶವನ್ನು ಹಂಚಿಕೊಂಡಿದೆ.

ಭಾರತೀಯತೆ ಮತ್ತು ಹಿಂದೂಗಳ ಅಸ್ಮಿತೆಯ ಮೇಲೆ ದಾಳಿ ಮಾಡುವ ವಿದೇಶಿ ಮನಸ್ಥಿತಿಯ ಕಾಂಗ್ರೆಸ್‌  ಸರ್ಕಾರವು ರಾಜ್ಯದಲ್ಲಿ ಅನುಷ್ಠಾನಗೊಳಿಸಿ ಪಾಲಿಸುತ್ತಾ ಬಂದಿರುವ ನಿಯಮಗಳು ಎಂದು ಪಟ್ಟಿಮಾಡಿರುವ ಬಿಜೆಪಿ,  ಔರಂಗಜೇಬ್‌ ಫ್ಲೆಕ್ಸ್‌ ಹಾಕಲು ಕಿಡಿಗೇಡಿಗಳಿಗೆ ಅವಕಾಶವಿದೆ.  ಊರವರು ಸೇರಿ ಹನುಮಧ್ವಜ ಹಾರಿಸಲು ಅವಕಾಶವಿಲ್ಲ.  ಕೋಲಾರದಲ್ಲಿ ಕತ್ತಿಯ ಕಮಾನು ನಿರ್ಮಿಸಲು ಅನುಮತಿಯಿದೆ. ಆದರೆ ಜೈ ಶ್ರೀರಾಮ್‌ ಎಂದರೆ ಜೈಲಿಗೆ,  ರಸ್ತೆಗಳಲ್ಲಿ ತಲ್ವಾರ್ ಹಿಡಿದು ಪ್ರದರ್ಶನ ಮಾಡುವವರಿಗೆ ಅನುಮತಿ ಇದೆ ಆದರೆ  ಹಿಂದೂಗಳು ಭಕ್ತಿಯಿಂದ ಭಜನೆ ಮಾಡಿದರೆ ಸಾರ್ವಜನಿಕ ಶಾಂತಿಗೆ ಭಂಗದ ನೆಪ‌ ಹೇಳಿ ಅನುಮತಿ ನಿರಾಕರಣೆ ಎಂದು ಆರೋಪಿಸಿದೆ. 
 
ಜೊತೆಗೆ,  ಬೀದಿಗಳಲ್ಲಿ ಇಫ್ತಾರ್‌ ಕೂಟಕ್ಕೆ ಅನುಮತಿಯಿದೆ.  ಗಂಧದಕಡ್ಡಿ ಹಚ್ಚಿದರೆ ಪೊಲೀಸರಿಂದ ತೆರವು.  ಸರ್ಕಾರಿ ಮೈದಾನದಲ್ಲಿ ಬಕ್ರೀದ್‌ಗೆ ಅವಕಾಶವಿದೆ.  ಅದೇ ಮೈದಾನದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶವಿಲ್ಲ. ಪ್ರಭು ಶ್ರೀ ರಾಮನ ಅಸ್ತಿತ್ವ ಪ್ರಶ್ನಿಸಿದಿರಿ, ರಾಮಸೇತು ಎಂಬುದೇ ಇಲ್ಲ ಎಂದಿರಿ, ರಾಮ ಯಾವ ಎಂಜಿನಿಯರಿಂಗ್‌ ಕಾಲೇಜಿಗೆ ಹೋಗಿದ್ದ ಎಂದು ಕುಹಕವಾಡಿದಿರಿ. ಈಗ ರಾಮಜನ್ಮಭೂಮಿಯಲ್ಲಿ ರಾಷ್ಟ್ರಮಂದಿರ ನಿರ್ಮಾಣ ಸಹಿಸಲಾಗದೆ ಸಿದ್ದರಾಮಯ್ಯ ಸರ್ಕಾರ  ಅವರ ಸರ್ಕಾರ ವಿಘ್ನಸಂತೋಷಿಗಳಂತೆ ವರ್ತನೆ ಮಾಡುತ್ತಿರುವುದು ಕೀಳು ಮನಸ್ಥಿತಿಯ ಹತ್ತು ಮುಖಗಳ ದರ್ಶನ ಎಂದು ಬಿಜೆಪಿ ಆರೋಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ