ಬೆಳ್ತಂಗಡಿ: ಇಲ್ಲಿ ಓಡಿಲ್ನಾಳ ಗ್ರಾಮದ 15 ವರ್ಷದ ಬಾಲಕ ಸುಮಂತ್ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರಿಗೆ ಅನುಮಾನ ಬರಲು ಪ್ರಮುಖ ಕಾರಣಗಳು ಇಲ್ಲಿವೆ.
ಸುಮಂತ್ ತಂದೆಯ ಪ್ರಕಾರ ಅವರ ಕುಟುಂಬಸ್ಥರಿಗೆ ಯಾರೂ ಶತ್ರುಗಳಿಲ್ಲ. ಹಾಗಿದ್ದರೂ ಇದು ಸಹಜ ಸಾವಲ್ಲ, ಯಾರೋ ಕೊಲೆ ಮಾಡಿ ಬಾವಿಗೆ ಎಸೆದಿದ್ದಾರೆ ಎಂಬ ಅನುಮಾನ ಅವರಿಗಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಆತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ನೀರು ಕುಡಿಯುತ್ತಿದ್ದ. ಆದರೆ ನೀರು ಕುಡಿದಿಲ್ಲ.
ಇನ್ನು ಬಾವಿಯವರೆಗೂ ರಕ್ತದ ಕಲೆಯಿತ್ತು. ಆದರೆ ಬಾವಿಯಲ್ಲಿ ಯಾವುದೇ ರಕ್ತದ ಅಂಶ ಕಂಡುಬಂದಿಲ್ಲ. ಹೀಗಾಗಿ ಯಾರೋ ಕೊಲೆ ಮಾಡಿ ಅಲ್ಲಿ ಬಿಸಾಡಿರಬಹುದು. ಅವನ ತಲೆಗೆ ಗಾಯವಾಗಿದೆ. ಇದು ಹೇಗೆ ಆಯ್ತು ಎಂಬುದು ಸುಮಂತ್ ತಂದೆಯ ಅನುಮಾನ.
ಇನ್ನು, ಆತನ ಸಹೋದರ, ತಾಯಿ ಸೇರಿದಂತೆ ಇತರೆ ಕುಟುಂಬಸ್ಥರ ಪ್ರಕಾರ ಆತ ಯಾರ ಸುದ್ದಿಗೂ ಹೋಗುವವನಲ್ಲ. ಜೀವನೋತ್ಸಾಹ ಹೊಂದಿದ್ದ ಹುಡುಗ. ಪ್ರತಿಭಾವಂತ. ಗುಜರಾತ್ ನ ಅಹ್ಮದಾಬಾದ್ ನಲ್ಲಿ ನಡೆಯಲಿದ್ದ ರಾಷ್ಟ್ರಮಟ್ಟದ ಸೈನ್ಸ್ ಫೇರ್ ನಲ್ಲಿ ಭಾಗಿಯಾಗುವ ಬಗ್ಗೆ ಉತ್ಸಾಹದಿಂದ ಮಾತನಾಡುತ್ತಿದ್ದ. ಆತನ ಸಹೋದರನ ಪ್ರಕಾರ ಆತ ಪ್ರತೀ ದಿನ ಅರ್ಧದಾರಿವರೆಗೆ ನಡೆದುಕೊಂಡು ನಂತರ ಸೈಕಲ್ ನಲ್ಲಿ ಹೋಗುತ್ತಿದ್ದ. ಆದರೆ ಆವತ್ತು ಅವನು ಸೈಕಲ್ ತೆಗೆದುಕೊಂಡು ಹೋಗಿರಲಿಲ್ಲ. ಇದೆಲ್ಲದರ ಬಗ್ಗೆ ಅನುಮಾನವಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.